ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಸೋಮವಾರ, 5–1–1998

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 19:45 IST
Last Updated 4 ಜನವರಿ 2023, 19:45 IST
   

ಹೆಗಡೆ ಬೆಂಬಲಿಗರಲ್ಲಿ ಗಡುವು ತಂದ ಜಿಜ್ಞಾಸೆ

ಬೆಂಗಳೂರು, ಜನವರಿ 4– ಲೋಕಶಕ್ತಿ ಸೇರಲು ಜನತಾದಳ ಶಾಸಕರು ಹಾಗೂ ಸಚಿವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಹೆಗಡೆಯವರು ನೀಡಿರುವ ಗಡುವು ಮುಗಿಯುವ ದಿನ ಹತ್ತಿರವಾಗುತ್ತಿದ್ದಂತೆಯೇ, ಹೆಗಡೆಯವರ ಬೆಂಬಲಿಗರಲ್ಲಿ ಈಗ ಭಾರಿ ಜಿಜ್ಞಾಸೆ ಉಂಟಾಗಿದೆ.

ಜನತಾದಳಕ್ಕೆ ರಾಜೀನಾಮೆ ನೀಡುವುದೇ ಅಥವಾ ಲೋಕಶಕ್ತಿಯನ್ನು ಸೇರುವುದೇ ಅಥವಾ ಜನತಾದಳದಲ್ಲಿ ಇದ್ದುಕೊಂಡೇ ಹೆಗಡೆಯವರಿಗೆ ಬೆಂಬಲ ನೀಡುವುದೇ ಅಥವಾ ಶಾಸಕ ಸ್ಥಾನಮಾನವನ್ನು ಉಳಿಸಿಕೊಂಡು ಬೆಂಬಲ ನೀಡುವುದೇ ಎಂಬ ಜಿಜ್ಞಾಸೆಯಲ್ಲಿ ದಳದ ಹಲವಾರು ಶಾಸಕರು, ಸಚಿವರು ನಿರತರಾಗಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ರೈತರಿಗೆ ಸಾಲದ ಜೊತೆ ತಂತ್ರಜ್ಞಾನ ನೆರವಿಗೆ ಪ್ರಧಾನಿ ಐ.ಕೆ. ಗುಜ್ರಾಲ್‌ ಕರೆ

ಬೀದರ್‌, ಜನವರಿ 4– ಸಹಕಾರ ಚಳವಳಿಯ ಮೂಲಕ ದೇಶದಲ್ಲಿ ಸಾಮಾಜಿಕ ಬದಲಾವಣೆ ತರುವುದಕ್ಕಾಗಿ ಮುಂದಾಗಬೇಕು ಎಂದು ಪ್ರಧಾನಿ ಐ.ಕೆ. ಗುಜ್ರಾಲ್‌ ಕರೆ ನೀಡಿದರು.

‘ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳು ರೈತರ ಸಾಲ ವಿತರಣೆಗೆ ಸೀಮಿತಗೊಳ್ಳದೆ ಅವರಿಗೆ ವೈಜ್ಞಾನಿಕ ಕೃಷಿ ಕೈಗೊಳ್ಳಲು ಸಲಹೆಗಾರರಾಗಿಯೂ ಕೆಲಸ ಮಾಡಬೇಕು. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ರೈತರನ್ನು ಪ್ರೇರೇಪಿಸುವ ಕೆಲಸವನ್ನು ಸಹಕಾರ ಚಳವಳಿಯ ಮೂಲಕ ಮಾಡಬೇಕು’ ಎಂದರು.

ಗುಜರಾತ್‌: ಇಂದು
ಪಾರೀಖ್‌ ರಾಜೀನಾಮೆ

ಗಾಂಧಿನಗರ, ಜನವರಿ 4 (ಪಿಟಿಐ)– ಗುಜರಾತಿನ ಮುಖ್ಯಮಂತ್ರಿ ದಿಲೀಪ್‌ ಪಾರೀಖ್‌ ಸೋಮವಾರ ತಮ್ಮ ರಾಜೀನಾಮೆ ಯನ್ನು ರಾಜ್ಯಪಾಲ ಕೃಷ್ಣಪಾಲ್‌ ಸಿಂಗ್‌ ಅವರಿಗೆ ಸಲ್ಲಿಸಲಿದ್ದಾರೆ.

ಆರ್‌ಜೆಪಿಯ ಸಂಸದೀಯ ಮಂಡಳಿ ಸಭೆಯು ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.