‘ರಾಜೀವ್ ಹೆಸರಿಗೆ ಮಸಿ’ ಸೋನಿಯಾ ಪ್ರತಿರೋಧ
ಬೆಂಗಳೂರು, ಜ. 15– ಬೊಫೋರ್ಸ್ ಫಿರಂಗಿ ಖರೀದಿ ಹಗರಣದಲ್ಲಿ ತಮ್ಮ ಪತಿ ರಾಜೀವ್ ಗಾಂಧಿ ಅವರ ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ ಸೋನಿಯಾ ಗಾಂಧಿ ಅವರು, ಈ ಹಗರಣದಲ್ಲಿ ಯಾರ್ಯಾರು ಭಾಗಿಗಳಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸುವಂತೆ ಇಂದು ಇಲ್ಲಿ ಕೇಂದ್ರ ಸರ್ಕಾರಕ್ಕೆ ನೇರ ಸವಾಲು ಹಾಕಿದರು.
ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಕಿಕ್ಕಿರಿದ ಜನಸ್ತೋಮದ ನಡುವೆ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಬೊಫೋರ್ಸ್ ಎನ್ನುವ ಹೆಸರಿನಲ್ಲಿ ನನ್ನ ಪತಿಯ ಬಗ್ಗೆ ಜನರಲ್ಲಿ ತಪ್ಪು ಭಾವನೆ ಬರುವಂತೆ ಅಪಪ್ರಚಾರ ನಡೆಯುತ್ತಿದೆ’ ಎಂದು ನೊಂದು ನುಡಿದರು.
ಮಾಜಿ ಪ್ರಧಾನಿ ನಂದಾ ನಿಧನ
ಅಹಮದಾಬಾದ್, ಜ. 15 (ಯುಎನ್ಐ)– ಮಾಜಿ ಪ್ರಧಾನಿ, ಶತಾಯುಷಿ ಹಾಗೂ ಇತ್ತೀಚೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡಿ ಗೌರವಿಸಲಾಗಿದ್ದ ಗುಲ್ಜಾರಿಲಾಲ್ ನಂದಾ ಅವರು ಇಂದು ಸಂಜೆ ನಿಧನರಾದರು.
ವೃದ್ಧಾಪ್ಯದ ಕಾರಣ ಸುದೀರ್ಘ ಕಾಲದಿಂದ ಬಳಲುತ್ತಿದ್ದ ನಂದಾ ಅವರು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಕೊನೆಯುಸಿರೆಳೆದರು.
ಈ ಗಾಂಧಿವಾದಿ ಮಹಾಚೇತನ ಪ್ರಾಣಬಿಟ್ಟಾಗ ಅವರ ಪುತ್ರಿ ಪುಷ್ಪಾಬೆನ್ ಅವರು ಬಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.