ಜನಸಾಮಾನ್ಯರಿಗೆ ಹೆಚ್ಚು ಹೊರೆಯಾದ ರೈಲ್ವೆ ಬಜೆಟ್
ನವದೆಹಲಿ, ಮೇ 29 (ಪಿಟಿಐ, ಯುಎನ್ಐ)– ಫ್ಲಾಟ್ಫಾರಂ ಟಿಕೆಟ್ ದರವೂ ಸೇರಿದಂತೆ ಎಲ್ಲ ರೈಲುಗಳ ಸಾಮಾನ್ಯ, ಎರಡನೇ ಮತ್ತು ಮೊದಲ ದರ್ಜೆ ಪ್ರಯಾಣ ದರವನ್ನು ತೀವ್ರ ಪ್ರಮಾಣದಲ್ಲಿ ಏರಿಸಲಾಗಿದೆ. ಭಾರತೀಯ ಜನತಾ ಪಕ್ಷದ ಮೊಟ್ಟಮೊದಲ ರೈಲ್ವೇ ಬಜೆಟ್ ಜನಸಾಮಾನ್ಯರ ಮೇಲೆ ತೀವ್ರ ಹೊರೆ ಹೇರಿದೆ.
ಪ್ರಯಾಣ ದರಗಳ ಏರಿಕೆಯಿಂದ 450 ಕೋಟಿ ರೂಪಾಯಿ ನಿರೀಕ್ಷಿಸಿರುವ ರೈಲ್ವೇ ಸಚಿವ ನಿತೀಶ್ ಕುಮಾರ್ ಅವರು 1,206 ಕೋಟಿ ರೂಪಾಯಿಗಳ ಉಳಿತಾಯ ರೈಲ್ವೆ ಬಜೆಟ್ ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದರು.
ಚೆನ್ನೈ ಮತ್ತು ಕಲ್ಕತ್ತ ಮಹಾನಗರ ರೈಲುಗಳೂ ಸೇರಿದಂತೆ ಎಲ್ಲ ರೈಲುಗಳ ಉನ್ನತ ದರ್ಜೆ ಪ್ರಯಾಣದಲ್ಲಿ ತೀವ್ರ ಏರಿಕೆ ಮಾಡಿರುವ ರೈಲ್ವೆ ಸಚಿವರುಎರಡನೇ ದರ್ಕೆ ಮತ್ತು ಸ್ಲೀಪರ್ ದರ್ಜೆಯಲ್ಲಿ ಮಧ್ಯಮ ಪ್ರಮಾಣದಲ್ಲಿ ಪ್ರಯಾಣ ದರ ಏರಿಕೆ ಮಾಡಿದ್ದಾರೆ.
ರಾಜ್ಯಕ್ಕೆ ಹೊಸ ರೈಲು: ಮಾರ್ಗ ವಿಸ್ತರಣೆ
ನವದೆಹಲಿ, ಮೇ 29– ಗುಂತಕಲ್ ಮಾರ್ಗವಾಗಿ ವಾರಕ್ಕೊಮ್ಮೆ ಬೆಂಗಳೂರು–ವಿಶಾಖಪಟ್ಟಣಂ ಎಕ್ಸ್ಪ್ರೆಸ್, ಕೊಂಕಣ ಮಾರ್ಗವಾಗಿ ಮಂಗಳೂರು–ಕುರ್ಲಾ ಎಕ್ಸ್ಪ್ರೆಸ್ ಹೊಸ ರೈಲುಗಳು, ತಿರುಚಿರಾಪಳ್ಳಿಯವರೆಗಿನ ಮಂಗಳೂರು– ಪಾಲ್ಘಾಟ್ ಎಕ್ಸ್ಪ್ರೆಸ್ ವಿಸ್ತರಣೆ, ಬ್ರಾಡ್ಗೇಜ್ ಕಾರ್ಯಮುಗಿದ ಮೇಲೆ ವಿಜಾಪೂರ–ಹೂಟಗಿ ನಡುವೆ ಮೂರು ಅವಳಿ ಪುಶ್–ಪುಲ್ ಸರ್ವಿಸಸ್ ಮತ್ತು ಕರ್ನೂಲ್ವರೆಗೆ ಸಿಕಂದರಾಬಾದ್ ಮಹಬೂಬ್ನಗರ ತುಂಗಭದ್ರಾ ಎಕ್ಸ್ಪ್ರೆಸ್ ವಿಸ್ತರಣೆ ಕರ್ನಾಟಕಕ್ಕೆ 1998–99ರ ನೂತನ ರೈಲ್ವೆ ಬಜೆಟ್ನ ಕೊಡುಗೆ.
ಬೆಂಗಳೂರು ನಗರದಲ್ಲಿನ ಸಂಚಾರ ಒತ್ತಡದ ಸಮಸ್ಯೆಯನ್ನು ಬಗೆಹರಿಸುವ ದಿಕ್ಕಿನಲ್ಲಿ ನಗರ ರೈಲು ಸೌಲಭ್ಯಕ್ಕಾಗಿ ಇಂಟಲ್ ಮೋಡಲ್ ಟ್ರಾನ್ಸ್ಪೋರ್ಟ್ ಸಿಸ್ಟಂ ಜಾರಿಗೆ ಸಮೋಕ್ಷೆ, ಹೈದರಾಬಾದ್–ರಾಯಚೂರು, ರಾಯಚೂರು ಮತ್ತು ಆಂಧ್ರದಲ್ಲಿರುವ ಗಡವಾಲ್ವರೆವಿಗೆ ಹೊಸ ಮಾರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಬಿಜೆಪಿ ನೇತೃತ್ವದ ಸರ್ಕಾರದ ರೈಲ್ವೆ ಸಚಿವ ನಿತೀಶ್ ಕುಮಾರ್ ಇಂದು ಲೋಕಸಭೆಯಲ್ಲಿ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್ನಲ್ಲಿ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.