ಕಾವೇರಿ: ತಜ್ಞ ಸಮಿತಿಯಿಂದ ಪರಿಹಾರ ಸೂತ್ರ ಶಿಫಾರಸು
ನವದೆಹಲಿ, ಜ. 22 (ಪಿಟಿಐ)– ಕಾವೇರಿ ನದಿ ನೀರಿನ ವಿವಾದದ ಕುರಿತು ವರದಿ ನೀಡಲು ನೇಮಕವಾದ ಡಾ. ವೈ.ಕೆ.ಅಲಘ್ ನೇತೃತ್ವದ ತಜ್ಞರ ಸಮಿತಿಯು ಕರ್ನಾಟಕ ಹಾಗೂ ತಮಿಳುನಾಡು ನಡುವೆ ನೀರಿನ ಹಂಚಿಕೆಯ ಕುರಿತು ಪರಿಹಾರ ಸೂತ್ರವೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಸ ಮಾಡಿದ ತಜ್ಞರ ತಂಡ, ಕಳೆದ ವರ್ಷಕ್ಕಿಂತ ಈ ಸಲ ಕಡಿಮೆ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಸೂತ್ರ ರೂಪಿಸಿದೆ ಎನ್ನಲಾಗಿದೆ.
ಗಗನಕ್ಕೆ ಚಿಮ್ಮಿದ ಸುಧಾರಿತ ಲಘು ಹೆಲಿಕಾಪ್ಟರ್
ಬೆಂಗಳೂರು, ಜ. 22– ರೆಕ್ಕೆಯನ್ನು ತಿರುಗಿಸುತ್ತಾ, ಮೋಡವಿಲ್ಲದ ಗಗನಕ್ಕೆ ಚಿಮ್ಮಿ, ಅತ್ತಿತ್ತ ತೇಲಾಡಿ, ಗಗನದಲ್ಲಿ ನಿಶ್ಚಲವಾಗಿ ನೆಲೆ ನಿಲ್ಲುವ ಮೂಲಕ ಎಚ್ಎಎಲ್ ರಕ್ಷಣಾ ವಿಮಾನ ನಿಲ್ದಾಣದಲ್ಲಿ ಸ್ಥಳೀಯವಾಗಿ ನಿರ್ಮಿಸಿದ ಸುಧಾರಿತ ಲಘು ಹೆಲಿಕಾಪ್ಟರ್ ಉದ್ಘಾಟನಾ ಹಾರಾಟ ನಡೆಸಿ ಭಾರತೀಯ ರಕ್ಷಣಾ ಪಡೆ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸಿತು.
ರಾಜ್ಯದ ಮೊದಲ ಕನ್ನಡ ಮುಕ್ತ ವಿ.ವಿಗೆ ಅಸ್ತು
ಬೆಂಗಳೂರು, ಜ. 22– ಹಾಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯನ್ನು ರಾಜ್ಯದ ಮೊದಲ ಪ್ರತ್ಯೇಕ ಕನ್ನಡ ಮುಕ್ತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲು ಇಂದಿನ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ರೀತಿಯಲ್ಲಿ ಈ ವಿಶ್ವವಿದ್ಯಾಲಯ ಶಿಕ್ಷಣ ನೀಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.