ಮಂಗಳವಾ 19–1–1999
ಅಮರ್ತ್ಯ ಸೆನ್ಗೆ ಭಾರತ ರತ್ನ
ನವದೆಹಲಿ, ಜ. 18 – ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೆನ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ, ‘ಭಾರತ ರತ್ನ’ ನೀಡಲಾಗಿದೆ.
64 ವರ್ಷ ವಯಸ್ಸಿನ ಸೆನ್ ಈ ಪ್ರಶಸ್ತಿ ಪಡೆಯುತ್ತಿರುವ 36ನೆಯವರು ಹಾಗೂ ಮೊಟ್ಟಮೊದಲ ಅರ್ಥಶಾಸ್ತ್ರಜ್ಞ. ಪ್ರಧಾನಿ ಎ.ಬಿ.ವಾಜಪೇಯಿ ಇಂದು ರಾಷ್ಟ್ರಪತಿಗಳನ್ನು ಭೇಟಿಯಾದ ಸ್ವಲ್ಪ ಹೊತ್ತಿನಲ್ಲೇ ರಾಷ್ಟ್ರಪತಿ ಭವನ ಸೆನ್ಗೆ ಭಾರತ ರತ್ನ ನೀಡುವ ಪ್ರಕಟಣೆ ಹೊರಡಿಸಿತು.
ಪಂಚಾಯ್ತಿ ಚುನಾವಣೆ ಮುಂದಕ್ಕೆ?
ಬೆಂಗಳೂರು, ಜ.18 – ಗ್ರಾಮ ಪಂಚಾಯ್ತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಪಂಚಾಯತ್ ರಾಜ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಗ್ರಾಮ ಪಂಚಾಯ್ತಿ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವ ಸಂಬಂಧ ಸಂಪುಟ ಸಭೆ ಯಾವುದೇ ಕಾಲಮಿತಿ ನಿಗದಿಪಡಿಸದೇ ಇರುವುದರಿಂದ ಬರುವ ಫೆಬ್ರುವರಿ–ಮಾರ್ಚಿ ತಿಂಗಳಲ್ಲಿ ನಡೆಯಬೇಕಾಗಿದ್ದ ಪಂಚಾಯ್ತಿ ಚುನಾವಣೆಗಳು ಅನಿರ್ದಿಷ್ಟ ಕಾಲ ಮುಂದಕ್ಕೆ ಹೋಗುವುದು ಈಗ ನಿಶ್ಚಿತವಾಗಿದೆ.
‘ಹಾಲಿ ಇರುವ ಗ್ರಾಮ ಪಂಚಾಯ್ತಿ ವ್ಯವಸ್ಥೆಯಲ್ಲಿ ಹಲವಾರು ನ್ಯೂನತೆಗಳಿದ್ದು, ಈ ವ್ಯವಸ್ಥೆಯಲ್ಲೇ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ; ವ್ಯವಸ್ಥೆಯಲ್ಲಿ ಬದಲಾವಣೆ ತಂದ ನಂತರವೇ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಹಾಗೂ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲು ಸಂಪುಟ ಸಭೆ ನಿರ್ಧರಿಸಿದೆ’ ಎಂದು ಸಭೆಯ ನಂತರ ವರದಿಗಾರರೊಂದಿಗೆ ಮಾತನಾಡಿದ ವಾರ್ತಾ ಸಚಿವ ಎಂ.ಸಿ ನಾಣಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.