ADVERTISEMENT

25 ವರ್ಷಗಳ ಹಿಂದೆ‌‌| ಅವ್ಯವಹಾರ: ಹಾಪ್ಸ್‌ಕಾಮ್ಸ್‌ ಆಡಳಿತ ಮಂಡಳಿ ರದ್ದು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 22:50 IST
Last Updated 28 ಮಾರ್ಚ್ 2024, 22:50 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಅವ್ಯವಹಾರ: ಹಾಪ್ಸ್‌ಕಾಮ್ಸ್‌ ಆಡಳಿತ ಮಂಡಳಿ ರದ್ದು

ಬೆಂಗಳೂರು, ಮಾರ್ಚ್‌ 28– ತೋಟಗಾರಿಗೆ ಉತ್ಪನ್ನಗಳ ಸಹಕಾರ ಮಾರುಕಟ್ಟೆ  ಮತ್ತು ಸಂಸ್ಕರಣಾ ಸಂಘದ (ಹಾಪ್ಸ್‌ಕಾಮ್ಸ್‌) ಆಡಳಿತ ಮಂಡಳಿಯನ್ನು ರದ್ದುಪಡಿಸಿರುವ ಸರ್ಕಾರ, ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ.

ಹಾಪ್ಸ್‌ಕಾಮ್ಸ್‌ನಲ್ಲಿ ನಡೆದಿದೆ ಎನ್ನಲಾದ ಭಾರಿ ಪ್ರಮಾಣದ ಹಣ ದುರುಪಯೋಗ ಹಾಗೂ ಇನ್ನಿತರ ಅಕ್ರಮಗಳ ಹಿನ್ನೆಲೆಯಲ್ಲಿ ಸರ್ಕಾರ ಆಡಳಿತ ಮಂಡಳಿಯನ್ನು ರದ್ದುಪಡಿಸಿದೆ. ಕಳೆದ 5–6 ವರ್ಷಗಳಿಂದ ಸಂಘದ ಲೆಕ್ಕಪತ್ರಗಳ ತಪಾಸಣೆಯೂ ಆಗಿಲ್ಲ ಎಂದು ಆರೋಪಿಸಲಾಗಿದೆ.

ADVERTISEMENT

ಅಲ್ಲದೆ, ಕಳೆದ 10ರಿಂದ 15 ವರ್ಷಗಳ ಅವಧಿಯಲ್ಲಿ ಹಾಪ್ಸ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಧಿಕಾರಿಗಳೇ ಹಣ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ಈ ಹಿಂದೆ ಆಗಿರುವ ಲೆಕ್ಕಪತ್ರಗಳ ತಪಾಸಣೆಯ ವರದಿಯಿಂದ ಬೆಳಕಿಗೆ ಬಂದಿದೆ.

ಮೂರುಸಾವಿರ ಮಠಕ್ಕೆ ಹಾನಗಲ್‌ಸ್ವಾಮಿ ಉತ್ತರಾಧಿಕಾರಿ

ಹುಬ್ಬಳ್ಳಿ, ಮಾರ್ಚ್‌ 28– ಹಲವಾರು ದಿನಗಳಿಂದ ಕುತೂಹಲದ ಕೇಂದ್ರವಾಗಿದ್ದ ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಿ ಇಂದು ಹಾನಗಲ್‌ ಕುಮಾರ ಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ನಾಳೆ ನಗರದಲ್ಲಿ ವಿಧ್ಯುಕ್ತವಾಗಿ ಅವರ ಪಟ್ಟಾಭಿಷೇಕ ನಡೆಯಲಿದೆ.

ಗದುಗಿನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳು, ಮುಂಡರಗಿ ಅನ್ನದಾನೇಶ್ವರ ಸ್ವಾಮಿಗಳು, ಬೈಲಹೊಂಗಲದ ಗಂಗಾಧರ ಸ್ವಾಮಿಗಳು, ಆನಂದಪುರದ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳ ಸಮ್ಮುಖದಲ್ಲಿ ನಡೆದ ಭಕ್ತರು ಹಾಗೂ ಗಣ್ಯರು ಸಭೆಯಲ್ಲಿ ಇಂದು ಈ ನಿರ್ಧಾರ ಕೈಗೊಳ್ಳಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.