
25 ವರ್ಷಗಳ ಹಿಂದೆ ಈ ದಿನ
ಮಂಡ್ಯದಲ್ಲಿ ಗಲಭೆ, ನಿಷೇಧಾಜ್ಞೆ
ಮಂಡ್ಯ, ನ. 25– ಯುವತಿಯೊಬ್ಬಳ ಆತ್ಮಹತ್ಯೆ ಘಟನೆಗೆ ಸಂಬಂಧಿಸಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವವಿಟ್ಟು ಸಾವಿರಾರು ಜನರು ಇಂದು ದಿನವಿಡೀ ಪ್ರತಿಭಟನೆ ನಡೆಸಿದರು. ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದರೂ ಹತೋಟಿಗೆ ಬರಲಿಲ್ಲ.
27ರವರೆಗೆ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ 144ನೇ ವಿಧಿಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಡಿವೈಎಸ್ಪಿ ಜವಾಹರಲಾಲ್ ಮುಖ್ಯ ಕಾರಣ. ಅವರನ್ನು ತಕ್ಷಣ ಸೇವೆಯಿಂದ ವಜಾಗೊಳಿಸಿ ಅವರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿನ್ನೆ ರಾತ್ರಿಯಿಂದಲೇ ಶವವಿಟ್ಟುಕೊಂಡು ಧರಣಿ ಆರಂಭಿಸಿದ ಪ್ರತಿಭಟನಾಕಾರರು, ಇಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದಿಗ್ಬಂಧನ ವಿಧಿಸಿ ಹೆದ್ದಾರಿ ತಡೆ, ಅಂಗಡಿ–ಮುಂಗಟ್ಟುಗಳ ಬಂದ್, ಕಲ್ಲುತೂರಾಟ ಮತ್ತಿತರ ಪ್ರತಿಭಟನೆ ಮಾಡಿದರು.
ವೀರಪ್ಪನ್ ಸೆರೆಗೆ ಹೊಸ ಕಾರ್ಯತಂತ್ರ
ಚೆನ್ನೈ, ನ. 25 (ಪಿಟಿಐ, ಯುಎನ್ಐ)– ನರಹಂತಕ ವೀರಪ್ಪನ್ನನ್ನು ಬಂಧಿಸಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು, ಇಂದು ಇಲ್ಲಿ ಹೊಸ ಕಾರ್ಯತಂತ್ರವೊಂದನ್ನು ರೂಪಿಸಿದವು.
ಕರ್ನಾಟಕ ಮತ್ತು ತಮಿಳುನಾಡಿನ ಉನ್ನತ ಅಧಿಕಾರಿಗಳ ಸಭೆಯ ನಂತರ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಹಾಗೂ ಅವರ ತಮಿಳುನಾಡು ಸಹೋದ್ಯೋಗಿ ಆರ್. ರಾಜ್ಗೋಪಾಲನ್ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
ಕಾರ್ಯತಂತ್ರ ಏನು ಎಂಬ ಬಗ್ಗೆ ಯಾವುದೇ ವಿವರ ನೀಡಲು ಅವರಿಬ್ಬರೂ ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.