ಕಾಂಗೈ: ಹಳೆತಲೆಗಳು ಹಿಂದಕ್ಕೆ ಹೊಸಬರಿಗೆ ಆದ್ಯತೆ ಸಂಭವ
ಬೆಂಗಳೂರು, ಮಾರ್ಚ್ 23– ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗೈ ಹೊಸ ಮುಖಗಳನ್ನು ಬಹುತೇಕ ಕ್ಷೇತ್ರ
ಗಳಲ್ಲಿ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚಿದ್ದು, ಇದರಿಂದಾಗಿ ಅನೇಕ ಹಳೆ ತಲೆಗಳು ನೇಪಥ್ಯಕ್ಕೆ ಸರಿಯುವುದು ಖಚಿತವಾಗಿದೆ.
ಶುಕ್ರವಾರ ಇಲ್ಲಿ ಮೊದಲ ಸಭೆ ಸೇರಿದ ರಾಜ್ಯ ಚುನಾವಣಾ ಸಮಿತಿ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್ ನೀಡಬೇಕು ಎನ್ನುವ ಸೂತ್ರವನ್ನು ಒಪ್ಪಿ, ಆ ಪಟ್ಟಿಯನ್ನು ಪರಿಶೀಲನಾ ಸಮಿತಿಯ (ಸ್ಕ್ರೀನಿಂಗ್ ಕಮಿಟಿ) ಅಂತಿಮ ತೀರ್ಮಾನಕ್ಕೆ ಕಳಿಸಿರುವುದು ಕಾಂಗೈ ಹೈಕಮಾಂಡಿನ ತಂತ್ರಗಳಲ್ಲಿ ಒಂದು ಎಂದೇ ಇಲ್ಲಿ ಭಾವಿಸಲಾಗಿದೆ. ಈ ಪಟ್ಟಿಯನ್ನು ಪರಿಶೀಲನಾ ಸಮಿತಿ ನೋಡಿ ಪಕ್ಕಕ್ಕೆ ಇಡುತ್ತದೆ, ಎಐಸಿಸಿ ಅಧ್ಯಕ್ಷರ ಸೂಚನೆಯಂತೆ ಹೊಸ ಯಾದಿಯೇ ಸಿದ್ಧವಾಗಿ ಪ್ರಕಟವಾಗಲಿದೆ ನೋಡಿ ಎಂದು ಹಿರಿಯ ಕಾಂಗೈ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.
ಬಿಎಸ್ಪಿ ಜತೆ ಮೈತ್ರಿಗೆ ದಳದಲ್ಲಿ ಭಿನ್ನಮತ
ನವದೆಹಲಿ, ಮಾರ್ಚ್ 23– ಉತ್ತರಪ್ರದೇಶ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಜನತಾದಳ ನಿರ್ಧರಿಸಿದೆ. ಉತ್ತರ ಪ್ರದೇಶದಲ್ಲಿ ಮಾತ್ರ ಸಮಾಜವಾದಿ ಪಕ್ಷದ ಜತೆ ಮೈತ್ರಿಗೆ ಆದ್ಯತೆ ನೀಡಲು ಇಂದು ಇಲ್ಲಿ ಅಂತ್ಯಗೊಂಡ ದಳದ ರಾಜಕೀಯ ವ್ಯವಹಾರ ಸಮಿತಿ ತೀರ್ಮಾನಿಸಿತು.
ಇದೇ ವೇಳೆ ಬಹುಜನ ಸಮಾಜ ಪಕ್ಷದೊಂದಿಗೂ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ದಳದ ಒಂದು ವಿಭಾಗ ಪಟ್ಟುಹಿಡಿದಿರುವ ಕಾರಣ ಸಮಾಜವಾದಿ ಪಕ್ಷದೊಂದಿಗೆ ಸ್ಥಾನ ಹೊಂದಾಣಿಕೆಗೆ ತೊಡಕು ಎದುರಾಗಿದೆ. ಜನತಾದಳದ ಅಧ್ಯಕ್ಷ ಲಾಲುಪ್ರಸಾದ್ ಯಾದವ್ ಅವರ ಬೆಂಬಲಿಗರಾದ ಹಲವಾರು ನಾಯಕರು ಬಿಎಸ್ಪಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.