ADVERTISEMENT

25 ವರ್ಷಗಳ ಹಿಂದೆ: ಬುಧವಾರ 12–2–1997

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 20:30 IST
Last Updated 11 ಫೆಬ್ರುವರಿ 2022, 20:30 IST
   

ರಾಮನಗರ: ಅಂಬರೀಷ್ ಸೋಲು

ಬೆಂಗಳೂರು, ಫೆ. 11– ಪ್ರಧಾನಿ ಎಚ್.ಡಿ. ದೇವೇಗೌಡರ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಿದ್ದ ರಾಮನಗರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಉಪಚುನಾವಣೆ ನಡೆದ ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಜನತಾದಳ ಹೀನಾಯವಾಗಿ ಸೋತಿದೆ.

ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ ಲಿಂಗಪ್ಪ ಅವರು ಜನತಾ ದಳದ ಅಭ್ಯರ್ಥಿ, ಚಲನಚಿತ್ರ ನಟ ಅಂಬರೀಷ್ ಅವರನ್ನು 9612 ಮತಗಳ ಭಾರಿ ಅಂತರದಿಂದ, ಚಿಕ್ಕನಾಯಕನ ಹಳ್ಳಿ ಕ್ಷೇತ್ರದಲ್ಲಿ ದಳದ ಬಂಡಾಯ ಸ್ಪರ್ಧಿ ಜೆ.ಸಿ. ಮಾಧುಸ್ವಾಮಿ ಅವರು ಅಧಿಕೃತ ಅಭ್ಯರ್ಥಿ ಸುರೇಶ ಬಾಬು ಅವರನ್ನು 4679 ಮತಗಳ ಅಂತರದಿಂದ ಸೋಲಿಸಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.

ADVERTISEMENT

ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜಿ. ಮಧುಸೂಧನ್ ಅವರು ಆಯ್ಕೆಗೊಂಡು ಬಿಜೆಪಿ ಸ್ಥಾನವನ್ನು ಉಳಿಸಿಕೊಳ್ಳುವಂತೆ ಮಾಡಿದ್ದಾರೆ. ತಮ್ಮ ಸಮೀಪ ಸ್ಪರ್ಧಿ ಜನತಾ ದಳದ ಶ್ರೀಕಂಠೇಗೌಡರನ್ನು 3147 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ರಾಮನಗರದಲ್ಲಿ ಎರಡು ವರ್ಷದ ಹಿಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ದೇವೇಗೌಡರು ಸಿ.ಎಂ ಲಿಂಗಪ್ಪ ಅವರನ್ನು ಸೋಲಿಸಿ ಮುಂದೆ ಬದಲಾದ ರಾಜಕಾರಣದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಪ್ರಧಾನಿಯಾಗಿ ಆಯ್ಕೆಗೊಂಡ ಬಳಿಕ ರಾಜ್ಯಸಭೆಗೆ ಚುನಾಯಿತರಾದ ಗೌಡರು ರಾಜೀನಾಮೆ ನೀಡಿದ್ದರಿಂದ ರಾಮನಗರ ಕ್ಷೇತ್ರ ತೆರವಾಗಿ ಈ ಉಪಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.