ಮತೀಯ ಶಕ್ತಿಗಳ ವಿರುದ್ಧ ಸಮರಕ್ಕೆ ರಂಗ ಸಮರ್ಥ
ಬೆಂಗಳೂರು, ನ. 24– ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳದೆ, ಮತೀಯವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಶಕ್ತಿ ಸಂಯುಕ್ತ ರಂಗಕ್ಕಿದೆ ಎಂದು ಪ್ರಧಾನಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಸ್ಪಷ್ಟಪಡಿಸಿದರು.
’ಮತೀಯವಾದಿ ಶಕ್ತಿಗಳನ್ನು ಎದುರಿಸಲು ಎಲ್ಲಾ ಜಾತ್ಯತೀತ ಶಕ್ತಿಗಳು ಒಂದಾಗಬೇಕು‘ ಎಂದು ಅವರು ಹೇಳಿದರು.
ಎರಡು ದಿನಗಳ ಭೇಟಿಗಾಗಿ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಪತ್ರಕರ್ತರು ’ಜಾತ್ಯತೀತ ಶಕ್ತಿಗಳ ಹಿತದೃಷ್ಟಿಯಿಂದ ಸಂಯುಕ್ತರಂಗವು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳ್ಳುವುದೇ?’ ಎಂದು ಪ್ರಶ್ನಿಸಿದಾಗ ’ಸಂಯುಕ್ತರಂಗವು ಇತರ ಎಲ್ಲ ಪಕ್ಷಗಳಷ್ಟೇ ಸದೃಢವಾಗಿದೆ ಎಂದು ಸಮರ್ಥಿಸಿಕೊಂಡರು.
ಜನತೆಯ ಸಂತಸಕ್ಕೆ ಸ್ಲೀವಾ ಆದ್ಯತೆ
ಬೆಂಗಳೂರು, ನ. 24– ’ನಾನು ಹೇಗೆ ಸಂತೋಷವಾಗಿದ್ದೇನೆಯೋ ಅದೇ ರೀತಿ ವಿಶ್ವದ ಜನರನ್ನು ಸಂತೋಷದಿಂದ ಇರುವಂತೆ ಮಾಡುವುದಕ್ಕೆ ನನ್ನ ಪ್ರಥಮ ಆದ್ಯತೆ’.
’ಇದಕ್ಕಾಗಿ ಆತಿ ಶೀಘ್ರದಲ್ಲಿಯೇ ವಿಶ್ವ ಪರ್ಯಟನೆ ಆರಂಭಿಸುತ್ತೇನೆ. ಧರ್ಮಾರ್ಥ ಕಾರ್ಯಗಳಿಗಾಗಿ ಹಣ ಸಂಗ್ರಹಣೆ ಮಾಡುವ ಉದ್ದೇಶದಿಂದ ಸಂಘಟಿಸುವ ಎಲ್ಲಾ ಕಾರ್ಯಕ್ರಮಗಳಿಗೆ ನೆರವು
ನೀಡುತ್ತೇನೆ‘.
ಶನಿವಾರ ರಾತ್ರಿ 46ನೇ ವಿಶ್ವಸುಂದರಿಯಾಗಿ ಆಯ್ಕೆಯಾದ ಗ್ರೀಸ್ ದೇಶದ ಚೆಲುವೆ ಏರಿನ್ ಸ್ಲೀವಾ ಅವರು ವ್ಯಕ್ತಪಡಿಸಿದ ಆಶಯಗಳು ಇವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.