ADVERTISEMENT

25 ವರ್ಷದ ಹಿಂದೆ | ಭಾನುವಾರ, 15 ಜೂನ್ 1997

ಪ್ರಜಾವಾಣಿ ವಿಶೇಷ
Published 14 ಜೂನ್ 2022, 20:00 IST
Last Updated 14 ಜೂನ್ 2022, 20:00 IST

ಪರಿಶಿಷ್ಟರಿಗೆ ಬಡ್ತಿ ಮೀಸಲು ಮುಂದುವರಿಸಲು ನಿರ್ಧಾರ

ಚೆನ್ನೈ ಜೂನ್‌ 14, (ಪಿಟಿಐ)- ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲು ಒದಗಿಸುವ ನೀತಿಯನ್ನು ಮುಂದುವರಿಸುವಂತೆ ಎಲ್ಲ ಇಲಾಖೆಗಳಿಗೂ ಸರ್ಕಾರವು ಈಗಾಗಲೇ ಆದೇಶ ನೀಡಿದೆ ಎಂದು ಕೇಂದ್ರ ಸರ್ಕಾರದ ಸಿಬ್ಬಂದಿ ಹಾಗೂ ಸಾರ್ವಜನಿಕ ದೂರು ಖಾತೆಯ ರಾಜ್ಯ ಸಚಿವ ಎಸ್‌.ಆರ್‌.ಬಾಲಸುಬ್ರಮಣ್ಯಂ ಇಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ಬಡ್ತಿಯಲ್ಲಿ ಪರಿಶಿಷ್ಟರಿಗೆ ಮೀಸಲಾತಿಯನ್ನು ಈ ವರ್ಷದ ನವೆಂಬರ್‌ 15ರ ಬಳಿಕ ಮುಂದುವರಿಸಬಾರದು ಎಂದು ಸುಪ್ರೀಂಕೋರ್ಟ್‌ 1992ರಲ್ಲಿ ತೀರ್ಪು ನೀಡಿದೆ. ಆದರೆ ಈ ವಿಷಯಕ್ಕೆ ಸಂಬಂಧಿಸಿ ಸರ್ಕಾರವು ಸೂಕ್ತ ಸಂವಿಧಾನ ತಿದ್ದುಪಡಿಯನ್ನು ಮಾಡಿದೆ. ಬಡ್ತಿಯಲ್ಲಿ ಮೀಸಲಾತಿಯನ್ನು ಮುಂದುವರಿಸಬೇಕೆಂದು ಬಳಿಕ ಸಂಪುಟ ಸಭೆಯು ತೀರ್ಮಾನಿಸಿದೆ’ ಎಂದು ತಿಳಿಸಿದರು.

ADVERTISEMENT

ಸಾಮರಸ್ಯದ ಕೊರತೆ: ಪಠ್ಯ ಪುಸ್ತಕ ಬಿಕ್ಕಟ್ಟು

ವಿಶೇಷ ವರದಿ, ಬೆಂಗಳೂರು, ಜೂನ್ 14– ರಾಜ್ಯದ ಎಲ್ಲೆಡೆ ಪಠ್ಯ ‍ಪುಸ್ತಕಗಳ ಕೊರತೆ ಕಂಡುಬಂದಿದ್ದು, ಪ್ರಕಾಶಕರು ಮತ್ತು ಚಿಲ್ಲರೆ ಮಾರಾಟಗಾರರ ನಡುವೆ ಉಂಟಾಗಿರುವ ‘ಸಾಮರಸ್ಯ’ದ ಕೊರತೆಯೇ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಹನ್ನೆರಡು ದಿನಗಳೇ ಕಳೆದಿವೆ. ಶಾಲೆಗಳಲ್ಲಿ ಪಾಠ, ಪ್ರವಚನಗಳು ಆರಂಭವಾಗಿವೆ. ಆದರೆ ಪಠ್ಯ ಪುಸ್ತಕಗಳಿಗಾಗಿ ಪೋಷಕರ, ವಿದ್ಯಾರ್ಥಿಗಳ ಅಲೆದಾಟ ಮಾತ್ರ ಇನ್ನೂ ತಪ್ಪಿಲ್ಲ. ಪಠ್ಯ ಪುಸ್ತಕಗಳ ಕೊರತೆ ಕೇವಲ ಒಂದೆರಡು ಜಿಲ್ಲೆಗಳಿಗೆ ಸೀಮಿತವಾಗದೆ ರಾಜ್ಯದಾದ್ಯಂತ ಪೋಷಕರು, ವಿದ್ಯಾರ್ಥಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.