ಸಂಚು ಭೇದಿಸಿದ ಸಿಓಡಿ
ಹುಬ್ಬಳ್ಳಿ, ಜುಲೈ 15– ಕಳೆದ ಶನಿವಾರ ಇಲ್ಲಿನ ಲೂಥೆರಾನ್ ಚರ್ಚ್ನಲ್ಲಿ ನಡೆದ ಬಾಂಬ್ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಇಬ್ಬರು ವ್ಯಕ್ತಿಗಳನ್ನು ಇಂದು ಇಲ್ಲಿ ಬಂಧಿಸುವ ಮೂಲಕ ಸಿಓಡಿ ಪೊಲೀಸರು, ಈ ಪ್ರಕರಣದ ಸಂಚನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಂಧನ ವಿಷಯವನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಓಡಿ ಎಸ್.ಪಿ ಎಂ.ಆರ್. ಪೂಜಾರ ಅವರು, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳನ್ನು ರಿಷಿ ಬಸವರಾಜು ಹಿರೇಮಠ (31) ಮತ್ತು ಸೈಯದ್ ಮುನೀರುದ್ದೀನ್ ಮುಲ್ಲಾ (38) ಎಂದು ಗುರುತಿಸಲಾಗಿದೆ. ಇವರಿಬ್ಬರು ಹಳೇ ಹುಬ್ಬಳ್ಳಿಯ ನಿವಾಸಿಗಳು ಮ್ತು ಹೈದರಾಬಾದ್ನ ದೀನದಾರ್ ಚೆನ್ನಬಸವೇಶ್ವರ ಸಿದ್ದಿಖಿ ಸಂಘಟನೆಯ ಹುಬ್ಬಳ್ಳಿ ಶಾಖೆಯ ಜಂಟಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳು.
*****
ದೂರಸಂಪರ್ಕ ಖಾಸಗಿಗೆ: ಏಕಸ್ವಾಮ್ಯಕ್ಕೆ ವಿದಾಯ
ನವದೆಹಲಿ, ಜುಲೈ 15– ನೂತನ ದೂರಸಂಪರ್ಕ ನೀತಿಗೆ ಅನುಗುಣವಾಗಿ ಎಸ್ಟಿಡಿ ಕರೆಗಳನ್ನೊಳಗೊಂಡ ರಾಷ್ಟ್ರೀಯ ದೂರಸಂಪರ್ಕ ನಿರ್ವಹಣೆಯನ್ನು ಇದೇ ಆಗಸ್ಟ್ 15ರ ವೇಳೆಗೆ ಖಾಸಗಿಯವರಿಗೆ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈ ಕ್ಷೇತ್ರದಲ್ಲಿನ ಸರ್ಕಾರದ ಏಕಸ್ವಾಮ್ಯವನ್ನು ಬಿಟ್ಟುಕೊಡಲಿದೆ.
ಮಾಹಿತಿ ತಂತ್ರಜ್ಞಾನ ಸಚಿವರ ಪ್ರಥಮ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರು, ‘ಖಾಸಗಿ ಕಂಪನಿಗಳ ಮೇಲೆ ಯಾವ ಮಿತಿಯನ್ನೂ ಹೇರದೆ ಆಸಕ್ತಿ ತೋರುವ ಎಲ್ಲಾ ಕಂಪನಿಗಳಿಗೂ ಅರ್ಹತೆ ಮೇಲೆ ಅವಕಾಶ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.