ಸರ್ಚಾರ್ಜ್ ರದ್ದು; ರೈತರಿಗೆ ರಿಯಾಯ್ತಿ;ಸಿಮೆಂಟ್, ಸಿಗರೇಟು ತುಟ್ಟಿ
ಬೆಂಗಳೂರು, ಮಾರ್ಚ್ 18– ರೈತರಿಗೆ ಹೆಚ್ಚು ರಿಯಾಯ್ತಿಗಳನ್ನು ಪ್ರಕಟಿಸಿ, ಎಲ್ಲ ವಸ್ತುಗಳ ಮೇಲಿನ ಸರ್ಚಾರ್ಜನ್ನು ರದ್ದುಗೊಳಿಸುವ ಮೂಲಕ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದ ಮುಂಗಡ ಪತ್ರವನ್ನು ಮಂಡಿಸಿದರು.
ಕೃಷಿ ಸಲಕರಣೆಗಳು, ರಸಗೊಬ್ಬರಗಳಿಗೆ ರಿಯಾಯ್ತಿ; ಮದ್ಯ, ಸಿಗರೇಟಿನ ಮೇಲೆ ತೆರಿಗೆ ಏರಿಕೆ; ಎಲೆಕ್ಟ್ರಾನಿಕ್ಸ್ ವಸ್ತುಗಳ ಕರಭಾರ ಇಳಿತ; ತೆರಿಗೆ ಹಂತಗಳ ಸರಳೀಕರಣ– ಇವು ಇಂದು ವಿರೋಧಪಕ್ಷಗಳ ಪ್ರತಿಭಟನೆಯ ನಡುವೆ ಮಂಡಿಸಲಾದ ರಾಜ್ಯ ಮುಂಗಡ ಪತ್ರದ ಮುಖ್ಯಾಂಶಗಳು.
ಇನ್ನೊಬ್ಬ ಲೇಖಕರಿಂದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನಿರಾಕರಣೆ
ಮೈಸೂರು, ಮಾರ್ಚ್ 18– ‘ಸಹಲೇಖಕರೊಬ್ಬರು ಮನಸ್ಸು ನೊಂದು ಬಹು ಮಾನವನ್ನು ತಿರಸ್ಕರಿಸಿರುವಾಗ, ಆ ಬಹು ಮಾನವನ್ನು ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ’ ಎಂಬ ಕಾರಣವನ್ನು ನೀಡಿ ಪ್ರೊ. ಜೆ.ಆರ್.ಲಕ್ಷ್ಮಣರಾವ್ ಅವರು ತಮಗೆ ನೀಡಲಾಗಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
‘ಧರ್ಮಕಾರಣ’ ಕಾದಂಬರಿಯ ಕರ್ತೃ ಡಾ. ಪಿ.ವಿ.ನಾರಾಯಣ ಅವರು, ಈ ಕೃತಿಯ ಸಂಬಂಧದಲ್ಲಿ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಮನನೊಂದು, ಅಕಾಡೆಮಿಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ತಿಳಿದ
ಪ್ರೊ.ರಾವ್ ಈ ತೀರ್ಮಾನಕ್ಕೆ ಬಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.