ADVERTISEMENT

25 ವರ್ಷಗಳ ಹಿಂದೆ | ಭಾನುವಾರ, 4–6–1995

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 19:45 IST
Last Updated 3 ಜೂನ್ 2020, 19:45 IST

‘ಕನ್ನಡ ಸಂಸ್ಕೃತಿ ಮೇಲೆ ಟಿ.ವಿ ದಾಳಿ ಬಾಂಬ್‌ಗಿಂತ ಭೀಕರ’
ರನ್ನಮಂಟಪ, ಮಧುರ ಚೆನ್ನ ವೇದಿಕೆ, ಮುಧೋಳ, ಜೂನ್‌ 3–
‘ದೂರದರ್ಶನ ಹಾಗೂ ಉಪಗ್ರಹ ಚಾನೆಲ್‌ಗಳ ಮೂಲಕ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಬಾಂಬ್‌ ದಾಳಿಗಿಂತ ಉಪಗ್ರಹದ ರಾಶಿ ಬಹು ಅಪಾಯಕಾರಿಯಾಗಿದೆ. ಹೊಲಸು ಹಾಡು, ಅಸಂಬದ್ಧ ಕುಣಿತ ನಮ್ಮ ಯುವ ಪೀಳಿಗೆಯ ಮೇಲೆ ತೀವ್ರ ಪರಿಣಾಮ ಬೀರೀತು’ ಎಂದು 64ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್‌.ಎಲ್‌.ನಾಗೇಗೌಡ ಇಂದು ಎಚ್ಚರಿಸಿದರು.

‘ಇಪ್ಪತ್ನಾಲ್ಕು ಗಂಟೆಯೂ ಟಿ.ವಿ ನೋಡುವ ಅವಕಾಶ ಇರುವಾಗ ಪುಸ್ತಕಗಳನ್ನು ಓದಲು ವೇಳೆ ಎಲ್ಲಿದೆ? ಮನುಷ್ಯನ ಆಳವಾದ ಚಿಂತನೆಯೇ ಒಳ್ಳೆಯ ಸಾಹಿತ್ಯ ಸೃಷ್ಟಿಗೆ ಕಾರಣ. ಅಂತಹ ಚಿಂತನೆಗೆ ಅವಕಾಶವಿಲ್ಲದಾಗ ಇನ್ನು ಒಳ್ಳೆಯ ಸಾಹಿತ್ಯ ಹೇಗೆ ಸೃಷ್ಟಿಯಾದೀತು’ ಎಂದು ಅವರು ಅಧ್ಯಕ್ಷ ಭಾಷಣದಲ್ಲಿ ಪ್ರಶ್ನಿಸಿದರು.

ಮುಲಾಯಂ ವಜಾ: ಮಾಯಾವತಿ ಹೊಸ ಮುಖ್ಯಮಂತ್ರಿ
ಲಖನೌ, ಜೂನ್‌ 3 (ಪಿಟಿಐ)–
ಉತ್ತರ ಪ್ರದೇಶದಲ್ಲಿ ಹದಿನೆಂಟು ತಿಂಗಳಿಂದ ಅಧಿಕಾರದಲ್ಲಿದ್ದ ಮುಲಾಯಂ ಸಿಂಗ್‌ ನೇತೃತ್ವದ ಸರ್ಕಾರವನ್ನು ಇಂದು ರಾತ್ರಿ ವಜಾ ಮಾಡಲಾಯಿತು. ನಂತರ ಕೆಲವೇ ಗಂಟೆಗಳಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ADVERTISEMENT

ಮಾಯಾವತಿ ಅವರನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲ ಮೋತಿಲಾಲ್‌ ವೋರಾ ಆಹ್ವಾನಿಸಿದ್ದರು. ಇಂದು ರಾತ್ರಿ 10.30ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಯಾವತಿ ಪ್ರಮಾಣವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.