ಅಶಿಸ್ತಿನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ನಾಯ್ಕರ್
ಹುಬ್ಬಳ್ಳಿ, ಜುಲೈ 28– ಕಾಂಗೈ ಪಕ್ಷ ಶಿಸ್ತಿಗೆ ಹೆಸರಾಗಿದ್ದು, ಈ ಶಿಸ್ತನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ನೂತನವಾಗಿ ಆಯ್ಕೆಯಾಗಿರುವ ಪ್ರದೇಶ ಕಾಂಗೈ ಅಧ್ಯಕ್ಷ ಹಾಗೂ ಸಂಸತ್ ಸದಸ್ಯ
ಡಿ.ಕೆ.ನಾಯ್ಕರ್ ಅವರು ಇಂದು ಇಲ್ಲಿ ಎಚ್ಚರಿಕೆ ನೀಡಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿರುವುದು ಮುಖ್ಯ. ಪಕ್ಷವನ್ನು ಸಮರ್ಥವಾಗಿ ಹಾಗೂ ಬಲಿಷ್ಠವಾಗಿ ಬೆಳೆಸಬೇಕಿದ್ದರೆ
ತ್ಯಾಗ ಕೂಡ ಅಷ್ಟೇ ಮಹತ್ವದ್ದು. ಶತಮಾನದಷ್ಟು ಹಳೆಯದಾಗಿರುವ ಕಾಂಗೈ ಪಕ್ಷಕ್ಕೆ ಉನ್ನತ ಪರಂಪರೆ ಇದ್ದು, ಇಲ್ಲಿ ಶಿಸ್ತಿಗೆ ಮತ್ತು ಒಗ್ಗಟ್ಟಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರಲ್ಲದೆ,ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುವಂತೆ ಮಾಡಲು ತಾವು ಕೂಡ ಸಾಕಷ್ಟು ಶ್ರಮಿಸುವುದಾಗಿ ಘೋಷಿಸಿದರು.
ಎಲ್ಟಿಟಿಇ ದಾಳಿ ವಿಫಲ– 200 ಉಗ್ರಗಾಮಿಗಳ ಸಾವು
ಕೊಲಂಬೊ, ಜುಲೈ 28 (ಯುಎನ್ಐ)– ಈಶಾನ್ಯ ಶ್ರೀಲಂಕಾದ ವೇಲಿ ವೊಯಾ ಪ್ರದೇಶದಲ್ಲಿ ಇಂದು ಸೇನಾ ನೆಲೆಯೊಂದನ್ನು ಧ್ವಂಸಗೊಳಿಸುವ ತಮಿಳು ಉಗ್ರಗಾಮಿಗಳ ಯತ್ನವನ್ನು ರಕ್ಷಣಾ ಪಡೆಗಳು ವಿಫಲಗೊಳಿಸಿವೆ.
ಕದನದಲ್ಲಿ ಸುಮಾರು 200 ಉಗ್ರಗಾಮಿಗಳು ಹಾಗೂ ಇಬ್ಬರು ಯೋಧರು ಸತ್ತರು.
ಜಾಫ್ನಾದ ಆಗ್ನೇಯ ಭಾಗದ ವೆಟ್ಟಿಲೈಕರ್ನಿಯಲ್ಲಿ ಇನ್ನೂ ಎಂಟು ಮಂದಿ ಎಲ್ಟಿಟಿಇ ಉಗ್ರಗಾಮಿಗಳು ಸತ್ತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.