ವೋರಾ ವರದಿ ಮಂಡನೆಗೆ ಸರ್ಕಾರಕ್ಕೆ ಸ್ಪೀಕರ್ ಆದೇಶ
ನವದೆಹಲಿ, ಜುಲೈ 31 (ಪಿಟಿಐ)– ನೈನಾ ಸಾಹ್ನಿಯ ಬರ್ಬರ ಹತ್ಯೆ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲೂ ಇಂದು ‘ಪ್ರತಿಧ್ವನಿ’ಗೊಂಡು ಮುಂಗಾರು ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಕಾಂಗೈ ಪಕ್ಷಕ್ಕೆ ಸಾಕಷ್ಟು ಇರುಸುಮುರುಸು ಉಂಟುಮಾಡಿತು.
ರಾಜಕೀಯದಲ್ಲಿ ಹಿಂಸಾಚಾರ ವಿಷಯದ ಅಡಿಯಲ್ಲಿ ರಾಜ್ಯಸಭೆಯಲ್ಲಿ ತಂದೂರ್ ಪ್ರಕರಣವನ್ನು ಪ್ರಸ್ತಾಪಿಸಿದ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಯು ರಾಜಕೀಯ ಅಪರಾಧೀಕರಣ ಕುರಿತ ವೋರಾ ಸಮಿತಿ ವರದಿ ಮಂಡನೆಗೆ ಪ್ರಶ್ನೋತ್ತರ ವೇಳೆಯಲ್ಲಿ ಪಟ್ಟು ಹಿಡಿದಾಗ ವರದಿಯನ್ನು ನಾಳೆ ಸಂಸತ್ತಿನಲ್ಲಿ ಮಂಡಿಸುವಂತೆ ಸ್ಪೀಕರ್ ಶಿವರಾಜ್ ಪಾಟೀಲ್ ಆದೇಶ ನೀಡಿದರು.
ಕಾಂಗೈ ಸಂಸದೀಯ ಪಕ್ಷದ ಕಾರ್ಯದರ್ಶಿ ಸುಧೀರ್ ಸಾವಂತ್ ಲೋಕಸಭೆಯಲ್ಲಿ ತಂದೂರ್ ಪ್ರಕರಣ ಹಾಗೂ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವಿಷಯಗಳನ್ನು ಎತ್ತಿದ್ದರಿಂದ ಸರ್ಕಾರ ಸಾಕಷ್ಟು ಮುಜುಗರವನ್ನು ಅನುಭವಿಸಬೇಕಾಯಿತು.
ವಿದ್ಯುತ್ ಯೋಜನೆಗೆ ಕೇಂದ್ರದ ಅನುಮತಿ ಇಲ್ಲ
ನವದೆಹಲಿ, ಜುಲೈ 31– ಮಂಗಳೂರಿನ ಎರಡು ಖಾಸಗಿ ಶಾಖೋತ್ಪನ್ನ ವಿದ್ಯುತ್ ಯೋಜನೆ, ರಾಯಚೂರು ಮತ್ತು ತೋರಣಗಲ್ನ (ಖಾಸಗಿ) ಎರಡು ಶಾಖೋತ್ಪನ್ನ ಮತ್ತು ಯಲಹಂಕದ ಡೀಸೆಲ್ ಜನರೇಟರ್ ಸೆಟ್ಗಳ ಕೇಂದ್ರದ ವಿಸ್ತರಣೆಯ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ವಿಧಿ ವಿಧಾನಗಳು ಪೂರ್ಣಗೊಳ್ಳಬೇಕಾಗಿರುವುದರಿಂದ ಅವುಗಳಿಗೆ ಕೇಂದ್ರ ಸರ್ಕಾರ ಇನ್ನೂ ಮಂಜೂರಾತಿ ನೀಡಿಲ್ಲ ಎಂದು ವಿದ್ಯುತ್ ಖಾತೆ ರಾಜ್ಯ ಸಚಿವೆ ಉರ್ಮಿಳಾ ಬೆನ್ ಪಟೇಲ್ ಇಂದು ಲೋಕಸಭೆಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.