ಎಲ್ಟಿಟಿಇ ಉಗ್ರಗಾಮಿಗಳ ಪರಾರಿ: ಸಂಸತ್ತಿನಲ್ಲಿ ಕಳವಳ
ನವದೆಹಲಿ, ಆ. 16 (ಪಿಟಿಐ)– ವೆಲ್ಲೂರಿನ ವಿಶೇಷ ಶಿಬಿರದಿಂದ 43 ಎಲ್ಟಿಟಿಇ ಉಗ್ರಗಾಮಿಗಳು ಪರಾರಿಯಾಗಿರುವ ಘಟನೆಗೆ ಲೋಕಸಭೆಯಲ್ಲಿ ಇಂದು ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಘಟನೆಯ ನೈತಿಕ ಹೊಣೆ ಹೊತ್ತು ಜಯಲಲಿತಾ ನೇತೃತ್ವದ ಸರ್ಕಾರ ರಾಜೀನಾಮೆ ನೀಡಬೇಕು ಎಂದು ಕಾಂಗೈ ಸದಸ್ಯರು ಆಗ್ರಹಪಡಿಸಿದರು.
ಇದರಿಂದ ಕಾಂಗ್ರೆಸ್ (ಐ) ಮತ್ತು ಎಐಎಡಿಎಂಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗೈನ ಮಣಿಶಂಕರ ಅಯ್ಯರ್ ಅವರು, ಜಯಲಲಿತಾ ಅವರು ರಾಜೀನಾಮೆ ನೀಡಬೇಕು, ಅದಕ್ಕೆ ಅವರು ಒಪ್ಪದಿದ್ದರೆ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಪಡಿಸಿದರು. ಈ ಬೇಡಿಕೆಯನ್ನು ಎಐಎಡಿಎಂಕೆ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು.
ಹೊಸ ವೃತ್ತಿ ಶಿಕ್ಷಣ ಕಾಲೇಜು ಬೇಡ– ಶಿಫಾರಸು
ಹುಬ್ಬಳ್ಳಿ, ಆ. 16– ರಾಜ್ಯದಲ್ಲಿ ಹೊಸದಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡಬಾರದೆಂದು ರಾಜ್ಯ ವಿಧಾನ ಮಂಡಳದ ಶಿಕ್ಷಣ ಇಲಾಖೆಯ ವಿಷಯ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ, ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಮೇಲೆ ಇಲ್ಲಿಯವರೆಗೆ ವಿಧಿಸಲಾಗಿದ್ದ ನಿಷೇಧ ಹಿಂತೆಗೆದುಕೊಳ್ಳಲು ತೀರ್ಮಾನಿಸಿರುವುದು ಇಲ್ಲಿ ಗಮನಾರ್ಹ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.