ಚುನಾವಣೆ ನೆರಳಲ್ಲಿ ಇಂದು ಸಂಸತ್ ಅಧಿವೇಶನ ಆರಂಭ
ನವದೆಹಲಿ, ನ. 26– ನಾಳೆಯಿಂದ ಇಪ್ಪತ್ತು ದಿನ ಸಂಸತ್ತಿನ ಅಧಿವೇಶನ. ಈ ಚಳಿಗಾಲದ ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆಗಳ ಅಸ್ತ್ರಗಳನ್ನು ಸಿದ್ಧ ಮಾಡಿಕೊಂಡಿವೆ. ಎಲ್ಲ ಸದಸ್ಯರ ತಲೆಯ ಮೇಲೆ ಚುನಾವಣೆಯ ತೂಗುಗತ್ತಿ ನೇತಾಡುತ್ತಿರುವುದರ ನಡುವೆ ಈ ಅಧಿವೇಶನ ನಡೆಯುತ್ತಿದೆ.
ಆಳುವ ಪಕ್ಷವು ಕಾಶ್ಮೀರ ಚುನಾವಣೆಗೆ ತಯಾರಾಗಿ ಚುನಾವಣಾ ಆಯೋಗದ ಅಡ್ಡಗಾಲಿನಿಂದ ಎದೆಗುಂದಿದ್ದು, ಈಗ ಸಿ.ಕೆ. ಜಾಫರ್ ಷರೀಫ್ ಅವರು ಸಂಪುಟಕ್ಕೆ ನೀಡಿದ ರಾಜೀನಾಮೆಯಿಂದ ತತ್ತರಿಸಿದ್ದರೆ, ತಾನು ಎಲ್ಲ ಪಕ್ಷಗಳಿಗಿಂತಲೂ ಭಿನ್ನ ಎಂದು ಬೀಗುತ್ತಿದ್ದ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಗುಜರಾತಿನಲ್ಲಾದ ಆಂತರಿಕ ಕಿತ್ತಾಟದಿಂದ ನಲುಗಿದೆ.
ಆಂಧ್ರ ಪ್ರದೇಶದಲ್ಲಾದ ಬೆಳವಣಿಗೆಯಿಂದ ತೆಲುಗು ದೇಶಂ ಇಬ್ಭಾಗವಾಗಿದ್ದರೆ, ಈ ಘಟನೆಯಿಂದ ಜನತಾದಳವು ಆಘಾತಕ್ಕೊಳಗಾಗಿದೆ. ಇತ್ತ ಸಮತಾ ಪಕ್ಷವು ಬಿಜೆಪಿ ಜತೆ ನಂಟು ಬೆಳೆಸಲು ಹೋಗಿ ಬಹುತೇಕ ಮಟ್ಟಿಗೆ ಹೋಳಾಗಿದೆ. ಇನ್ನು ಎಡಪಕ್ಷಗಳು ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ ಎನ್ನುವಂತಿವೆ. ಸಂಸತ್ತಿನ ಪ್ರಮುಖ ಪಕ್ಷಗಳ ಈ ಸ್ಥಿತಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ.
ಕ್ರಿಕೆಟ್ ದುರಂತ– 9 ಸಾವು
ನಾಗಪುರ, ನ. 26– ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಐದನೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನೋಡುತ್ತಿದ್ದ ಪ್ರೇಕ್ಷಕರು ಕುಳಿತಿದ್ದ ಪೂರ್ವ ಭಾಗದ ಸ್ಟ್ಯಾಂಡ್ನ ಮೇಲ್ಭಾಗದ ಪಾಗಾರ ಕುಸಿದು ಒಂಬತ್ತು ಮಂದಿ ಸತ್ತರು. ಸುಮಾರು 70 ಮಂದಿ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.