ADVERTISEMENT

25 ವರ್ಷಗಳ ಹಿಂದೆ: ಭಾನುವಾರ 3-12-1995

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 19:10 IST
Last Updated 2 ಡಿಸೆಂಬರ್ 2020, 19:10 IST
   

ಮೌಲ್ಯವರ್ಧಿತ ತೆರಿಗೆ ಜಾರಿಗೆ ರಾಜ್ಯಗಳ ಒಪ್ಪಿಗೆ

ನವದೆಹಲಿ, ಡಿ. 2 (ಪಿಟಿಐ, ಯುಎನ್‌ಐ)– ರಾಜ್ಯಗಳು ತಮಗಿಷ್ಟ ಬಂದಂತೆ ತೆರಿಗೆ ಪೈಪೋಟಿಯಲ್ಲಿ ತೊಡಗಬಾರದು ಮತ್ತು ನೇರ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ್‌ ಸಿಂಗ್‌ ಕರೆ ನೀಡಿದ್ದರೂ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ಹಂತ ಹಂತವಾಗಿ ಜಾರಿಗೆ ತರಲು ರಾಜ್ಯ ಹಣಕಾಸು ಸಚಿವರು ಇಂದು ಒಪ್ಪಿಕೊಂಡಿದ್ದಾರೆ.

ಪ್ರತಿಯೊಂದು ರಾಜ್ಯವೂ ಅಗತ್ಯ ಸಿದ್ಧತೆ ಮಾಡಿಕೊಂಡ ನಂತರವೇ ಮೌಲ್ಯವರ್ಧಿತ ತೆರಿಗೆಯನ್ನು ಜಾರಿಗೊಳಿಸಬೇಕು. ಮಾರಾಟ ತೆರಿಗೆ ಸುಧಾರಣೆಗಳ ಅನುಷ್ಠಾನದ ಮೇಲ್ವಿಚಾರಣೆ ಸೇರಿದಂತೆ ‘ವ್ಯಾಟ್‌’ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಕೈಗೊಳ್ಳುವ ಕ್ರಮಗಳ ವಿಮರ್ಶೆಗೆ ‘ಮೇಲ್ವಿಚಾರಣಾ ಸಮಿತಿ’ ರಚಿಸಬೇಕು ಎಂದು ರಾಜ್ಯ ಹಣಕಾಸು ಸಚಿವರು ಅಭಿಪ್ರಾಯ‍ಪಟ್ಟಿದ್ದಾರೆ.

ADVERTISEMENT

ಮಾರಾಟ ತೆರಿಗೆ ಸುಧಾರಣೆ ಸಂಬಂಧ ರಾಜ್ಯ ಹಣಕಾಸು ಸಚಿವರ ಸಮಿತಿಯ ವರದಿ ಹಾಗೂ ಆರ್ಥಿಕ ಸುಧಾರಣೆ– ಸ್ಟ್ಯಾಂಪ್‌ ತೆರಿಗೆ ಬಗ್ಗೆ ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ನೀತಿ ಸಂಸ್ಥೆಯ ವರದಿ ಕುರಿತು ಚರ್ಚಿಸುವ ಸಲುವಾಗಿ ರಾಜ್ಯ ಹಣಕಾಸು ಸಚಿವರ ಒಂದು ದಿನದ ಸಮ್ಮೇಳನ ಇಂದು ನಡೆಯಿತು.

ಸೇನೆ ವಶಕ್ಕೆ ಜಾಫ್ನಾ‌

ಕೊಲಂಬೊ, ಡಿ. 2 (ಯುಎನ್‌ಐ, ರಾಯಿಟರ್ಸ್‌)– ಸೇನಾ ಕಾರ್ಯಾಚರಣೆಯ 46ನೇ ದಿನವಾದ ಇಂದು, ಎಲ್‌ಟಿಟಿಇಯ ಪ್ರಮುಖ ನೆಲೆಯಾದ ಉತ್ತರ ಜಾಫ್ನಾ ಪಟ್ಟಣವನ್ನು ವಶಪಡಿಸಿಕೊಂಡಿರುವುದಾಗಿ ಶ್ರೀಲಂಕಾ ಸೇನೆ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.