ADVERTISEMENT

ಕೃಷಿ ಕನಿಷ್ಠ ಕೂಲಿ ಹೆಚ್ಚಳ: 30 ಮಿನಿ ವಿಧಾನಸೌಧ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 17:25 IST
Last Updated 30 ಮಾರ್ಚ್ 2019, 17:25 IST

ಕೃಷಿ ಕನಿಷ್ಠ ಕೂಲಿ ಹೆಚ್ಚಳ: 30 ಮಿನಿ ವಿಧಾನಸೌಧ

ಬೆಂಗಳೂರು, ಮಾ. 30– ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಹೆಚ್ಚಳ, ಮನರಂಜನಾ ತೆರಿಗೆಯಲ್ಲಿ ವಿನಾಯಿತಿ. ಲಂಬಾಣಿ ಗ್ರಾಮಗಳಿಗೆ ಕಂದಾಯ ವ್ಯಾಪ್ತಿಯ ಸ್ಥಾನಮಾನ. 30 ಮಿನಿ ವಿಧಾನ ಸೌಧಗಳ ನಿರ್ಮಾಣ ಸೇರಿದಂತೆ ಹಲವು ಹೊಸ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ವಿಧಾನ ಸಭೆಯಲ್ಲಿ ಪ್ರಕಟಿಸಿದರು.

ನೀರಾವರಿ ಸಹಕಾರಿ ಸಂಘಗಳಿಗೆ ಮುದ್ರಾಂಕಿತ ಶುಲ್ಕ ರದ್ಧು, ಮರದ ಆಟಿಕೆ ಸಾಮಾನುಗಳಿಗೆ ಸಂಪೂರ್ಣ ತೆರಿಗೆ ವಿನಾಯ್ತಿ. ಲಂಬಾಣಿ ಅಭಿವೃದ್ಧಿ ನಿಗಮ ಸ್ಥಾಪನೆ, ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆಗಳ ಸ್ಥಾಪನೆ ಹಣಕಾಸು ನೆರವು, ಪಾಲಿಟೆಕ್ನಿಕ್‌ ಶಿಕ್ಷಕರಿಗೆ ಹೊಸ ವೇತನ, ಬೆಳಗಾವಿ ಜಿಲ್ಲೆಗೆ ತೋಟಗಾರಿಕೆ ಕಾಲೇಜು ಹಾಗೂ ಇತರ ಹಲವಾರು ಹೊಸ ಕಾರ್ಯಕ್ರಮಗಳನ್ನು 1994–95ನೇ ಸಾಲಿನಲ್ಲಿ ಅನುಷ್ಠಾನಗೊಳಿಸುವುದಾಗಿ ಅವರು ಹೇಳಿದರು.

ADVERTISEMENT

ಗ್ಯಾಟ್ ಒಪ್ಪದೆ ವಿಧಿಯಿಲ್ಲ

ನವದೆಹಲಿ, ಮಾ. 30 (ಯುಎನ್‌ಐ, ಪಿಟಿಐ)– ಅಸಮಾನ ವಿಶ್ವದಲ್ಲಿ ‘ಗ್ಯಾಟ್‌’ನ್ನು ಒಪ್ಪಿಕೊಳ್ಳದೆ ರಾಷ್ಟ್ರಕ್ಕೆ ಬೇರೆ ಮಾರ್ಗವೇ ಇಲ್ಲ. ಗ್ಯಾಟ್‌ಗೆ ಸಹಿ ಹಾಕುವುದು ರಾಷ್ಟ್ರಕ್ಕೆ ಹಿತಕರ. ಒಪ್ಪಂದದಿಂದ ಹೊರಗುಳಿಯುವುದಕ್ಕಿಂತ ಅದರ ವ್ಯಾಪ್ತಿಗೆ ಸೇರುವುದು ಹಲವು ರೀತಿಯಲ್ಲಿ ಉಪಯುಕ್ತ ಎಂದು ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರು ಇಂದು ಲೋಕಸಭೆಯಲ್ಲಿ ನುಡಿದರು.

ಒಪ್ಪಂದ ನಿರೀಕ್ಷಿಸಿದಷ್ಟು ವಿಸ್ಕೃತವಾಗಿಲ್ಲವೆನಿಸಿದರೂ, ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಅದು ಹಲವು ರೀತಿಯಲ್ಲಿ ನೆರವಾಗಲಿದೆ ಎಂದು ಅವರು ಹೇಳಿದರು.

ಮುಂದಿನ ತಿಂಗಳು ಸಹಿ ಹಾಕಬೇಕಾದ ಗ್ಯಾಟ್ ಒಪ್ಪಂದ ಕುರಿತು ಚರ್ಚೆಗಾಗಿ ಕರೆಯಲಾಗಿರುವ ಲೋಕಸಭೆಯ ವಿಶೇಷ ಅಧಿವೇಶನದ ಎರಡನೇ ಮತ್ತು ಅಂತಿಮ ದಿನವಾದ ಇಂದು ಅವರು ಚರ್ಚೆಯಲ್ಲಿ ಮಧ್ಯ‍ಪ್ರವೇಶಿಸಿ ಮಾತನಾಡುತ್ತಾ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.