ಮೇಯರ್, ಉಪಮೇಯರ್ ಸ್ಥಾನ ಕಾಂಗೈಗೆ
ಬೆಂಗಳೂರು, ಜೂನ್ 27– ಬೆಂಗಳೂರು ಮಹಾನಗರಪಾಲಿಕೆಯ ಪ್ರಸಕ್ತ ಅವಧಿಯ ಕೊನೆ ಮೇಯರ್ ಆಗಿ ಹಿಂದುಳಿದ ವರ್ಗಕ್ಕೆ ಸೇರಿದ ಕಾಂಗ್ರೆಸ್ಸಿನ ಜಿ. ಕುಪ್ಪುಸ್ವಾಮಿ ಹಾಗೂ ಉಪಮೇಯರ್ ಆಗಿ ಪ್ರೇಮ ಕರಿಯಪ್ಪ ಅವರು ಇಂದು ಚುನಾಯಿತರಾದರು.
ದಳ ಬಿಕ್ಕಟ್ಟು– ಸಂಧಾನ ಯತ್ನಕ್ಕೆ ಹಿನ್ನಡೆ
ನವದೆಹಲಿ, ಜೂನ್ 27 (ಪಿಟಿಐ, ಯುಎನ್ಐ)– ಜನತಾದಳದ ಬಿಕ್ಕಟ್ಟನ್ನು ಪರಿಹರಿಸಲು ಪಕ್ಷದ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಕರೆದಿದ್ದ ಉಭಯ ಬಣಗಳ ಸಭೆಗೆ ವಿವಾದದ ಕೇಂದ್ರ ಬಿಂದುಗಳಾದ ಬಿಹಾರ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರು ಇಂದು ಹಾಜರಾಗಲಿಲ್ಲ. ಇದರಿಂದಾಗಿ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಿದೆ.
ಬಿಹಾರದಲ್ಲಿ ಜೂನ್ 29 ರಂದು ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು ತುರ್ತು ಕಾರ್ಯಗಳಿರುವುದರಿಂದ ಬೊಮ್ಮಾಯಿ ಅವರು ಕರೆದಿರುವ ಸಭೆಗೆ ಬರಲು ಆಗುತ್ತಿಲ್ಲ ಎಂದು ಲಲ್ಲೂ ಪ್ರಸಾದ್ ಯಾದವ್ ಅವರು ಹೇಳಿದ್ದರೆ, ಅಸೌಖ್ಯದಿಂದಾಗಿ ಸಭೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಬಿಜು ಪಟ್ನಾಯಕ್ ಅವರು ತಿಳಿಸಿದ್ದಾರೆ. ಇವರಿಬ್ಬರ ಗೈರುಹಾಜರಿ ಹಲವು ವ್ಯಾಖ್ಯಾನಗಳಿಗೆ ಎಡೆಮಾಡಿದೆ.
ರಾಜೀವ್ ವೈದ್ಯಕೀಯ ವಿ.ವಿ. ಆಗಸ್ಟ್ 20ಕ್ಕೆ ಆರಂಭ
ಹುಬ್ಬಳ್ಳಿ, ಜೂನ್ 27– ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಈ ವರ್ಷದ ಆಗಸ್ಟ್ 20 ರಂದು ಆರಂಭವಾಗಲಿದ್ದು ಅದಕ್ಕೆ ಅಗತ್ಯವಾದ ಎಲ್ಲಾ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಬಿ. ಶಿವಣ್ಣ ಅವರು ಇಂದು ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.