ದೂತಾವಾಸ ಸಿಬ್ಬಂದಿಗೆ ಹಿಂಸೆ: ಪಾಕ್ ನಿಲುವಿಗೆ ಭಾರತ ಆಕ್ಷೇಪ
ನವದೆಹಲಿ, ಜುಲೈ 22 (ಪಿಟಿಐ)– ರಾಜತಂತ್ರಜ್ಞರನ್ನು ನೋಡಿಕೊಳ್ಳುವ ರೀತಿಯಲ್ಲಿ ಪಾಕಿಸ್ತಾನ ಪದೇಪದೇ ಸದಾಚಾರ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದಕ್ಕೆ ಭಾರತ ಇಂದು ತೀವ್ರ ವಿಷಾದ ವ್ಯಕ್ತಪಡಿಸಿದೆ. ಈ ಸದಾಚಾರ ಸಂಹಿತೆಯ ಮರುಪರಿಶೀಲನೆಗೆ ಮಾಮೂಲಿ ಸಮಾಲೋಚನೆಗಳ ಬದಲು ರಚನಾತ್ಮಕ ಮಾತುಕತೆ ನಡೆಯಬೇಕೆಂದು ಬಯಸಿದೆ.
ಪಾಕಿಸ್ತಾನ ಸದ್ವರ್ತನೆಯ ರೀತಿ ನೀತಿಗಳನ್ನು ಕಡೆಗಣಿಸಿ ಕೈಗೊಂಡಿರುವ ಕ್ರಮಗಳ ಹಿನ್ನೆಲೆಯಲ್ಲಿ, ಸದಾಚಾರ ಸಂಹಿತೆಯ ಅನುಷ್ಠಾನ ಕುರಿತು ಮಾಮೂಲಿನಂತೆ ಚರ್ಚೆಗಾಗಿಕರೆದಿದ್ದ ಸಭೆಯಲ್ಲಿ ಪಾಕಿಸ್ತಾನಿ ಹೈಕಮಿಷನ್ಗೆ ಭಾರತದ ನಿಯೋಗವೊಂದು ಈ ಅಭಿಪ್ರಾಯವನ್ನು ತಿಳಿಸಿತು.
ರ್ಯಾಲಿ: ಸರ್ವ ಪಕ್ಷ ಒಕ್ಕಲಿಗರಿಗೆ ಕರೆ
ಬೆಂಗಳೂರು, ಜುಲೈ 22– ಒಕ್ಕಲಿಗ ಜನಾಂಗಕ್ಕೆ ಮಾರಕವಾಗಿರುವ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ವರದಿ ಆಧಾರಿತ ಸರ್ಕಾರಿ ಆದೇಶವನ್ನು ಹಿಂತೆಗೆದುಕೊಳ್ಳದೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘ ಸ್ಪಷ್ಟಪಡಿಸಿದೆ.
ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಜುಲೈ 25ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾಸಭೆ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಣಯಿಸಲಿದೆ ಎಂದು ಸಂಘದ ಅಧ್ಯಕ್ಷ ಗುತ್ತಲಗೌಡ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರ ಈ ಬಗ್ಗೆ ನೀಡುವ ಯಾವುದೇ ಪೊಳ್ಳು ಭರವಸೆಗೆ ಮರುಳಾಗದಿರಿ ಎಂದು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.