ರಾಜ್ಯದಲ್ಲಿ ಶೇ 73 ಮೀಸಲಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ನವದೆಹಲಿ, ನ. 11 (ಪಿಟಿಐ)– ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಹಿಂದುಳಿದವರಿಗೆ ಮೀಸಲು ಪ್ರಮಾಣವನ್ನು ಶೇಕಡ 73ಕ್ಕೆ ಏರಿಸುವ ಸಲುವಾಗಿ ಕರ್ನಾಟಕ ಸರ್ಕಾರ ತಂದಿರುವ ಕಾನೂನಿನ ಜಾರಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಮಂಡಲ್ ಪ್ರಕರಣದಲ್ಲಿ ಮಿತಿಗೊಳಿಸಿರುವ ಶೇಕಡ 50 ಮೀಸಲಾತಿಯನ್ನು ಮೀರುವ ಈ ಕಾನೂನಿಗೆ ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ರಸಋಷಿಯ ಚೇತನ ಪ್ರಕೃತಿಯಲ್ಲಿ ಲೀನ
ಶಿವಮೊಗ್ಗ, ನ. 11– ಕನ್ನಡ ಸಾರಸ್ವತ ಲೋಕದ ಮೇರು ಪ್ರತಿಭೆ, ರಸಋಷಿ, ಯುಗದ ಕವಿ ಕುವೆಂಪು ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಸ್ವಗ್ರಾಮ ಕುಪ್ಪಳಿಯ ‘ಕವಿಶೈಲ’ದಲ್ಲಿ ಇಂದು ಮಧ್ಯಾಹ್ನ ನಡೆಯಿತು.
ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ನಿಸರ್ಗ ಕವಿಯ ಚೇತನ, ಪ್ರಕೃತಿ ಸೌಂದರ್ಯದ ನೆಲೆವೀಡಾದ, ಕವಿಗೆ ಸ್ಫೂರ್ತಿಯ ತಾಣವಾದ ಕವಿಶೈಲದ ಕಾನನದಲ್ಲಿ ಅಸಂಖ್ಯಾತ ಅಭಿಮಾನಿಗಳ, ಆಪ್ತರ, ಬಂಧುಮಿತ್ರರ ಅಶ್ರುತರ್ಪಣ
ದೊಂದಿಗೆ ಲೀನವಾಗಿ ಅಮರವಾಯಿತು.
ಕಾನೂನು ಕತ್ತೆಯ ‘ಶೇಷನ್ ಒದೆತ’
ಬೆಂಗಳೂರು, ನ. 11– ಚುನಾವಣಾ ಕಾನೂನನ್ನೂ ಕತ್ತೆ ಎಂದು ಭಾವಿಸಿ ಮೈಮರೆತಿದ್ದ ರಾಜಕಾರಣಿಗಳಿಗೆ ಅದರ ಒದೆತದ ಸವಿ ಉಣಿಸಿದವರು ದೇಶದ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್: ಹಲವು ಕಾನೂನುಗಳನ್ನು ಒಟ್ಟಾಗಿ ಹೆಣೆದು ಅಭ್ಯರ್ಥಿಗಳಿಗೆ ಮೂಗುದಾರ ಹಾಕಿದ್ದು ಅವರ ಸಾಧನೆ.
ಶೇಷನ್ ಅವರ ಮಾತಿನಲ್ಲೇ ಹೇಳುವುದಾದರೆ, ಅಧಿಕಾರಸ್ಥರ ಕಾಲೊರೆ ಸಾಗಿದ್ದ ಚುನಾವಣಾ ಆಯೋಗಕ್ಕೆ ಗಟ್ಟಿ ಅಸ್ತಿತ್ವ ಬಂದದ್ದೇ ಈಗ. ಹಲವು ಉನ್ನತ ಸ್ಥಾನಗಳಲ್ಲಿನ ಅನುಭವ. ಸಂವಿಧಾನ ಹಾಗೂ ವಿವಿಧ ಕಾನೂನುಗಳಲ್ಲಿ ಇರುವ ಪಾಂಡಿತ್ಯವೇ ಶೇಷನ್ ಬ್ರಹ್ಮಾಸ್ತ್ರ. ನಿಯಮಗಳ ವಿಷಯದಲ್ಲಿ ಅವರೆಂದೂ ಕೈಸುಟ್ಟುಕೊಂಡವರಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.