ಹೆಗಡೆಯವರದ್ದೇ ಸಂಪುಟ: ದೇವೇಗೌಡ ನಾಮಕಾವಾಸ್ತೆ
ರಾಯಚೂರು, ಡಿ. 20– ಎಚ್.ಡಿ. ದೇವೇಗೌಡರು ನಾಮಕಾವಾಸ್ತೆ ಮುಖ್ಯಮಂತ್ರಿಯಾಗಿದ್ದು, ಮಂತ್ರಿಮಂಡಳದ ನಿಜವಾದ ಸೂತ್ರವೆಲ್ಲವೂ ಆ ಪಕ್ಷದ ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರ ಬಿಗಿ ಮುಷ್ಟಿಯಲ್ಲಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗೈ ಸದಸ್ಯ ಬಸವರಾಜ ಪಾಟೀಲ ಅನ್ವರಿ ವಿಶ್ಲೇಷಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಜನತಾ ದಳ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ದಿನ ಗೌಡರ ಬೆಂಬಲಿಗರು ಎನ್ನಲಾದ ಹಲವರು ವಿಧಾನಸೌಧದ ಸುತ್ತಮುತ್ತ ಎಬ್ಬಿಸಿದ ದಾಂದಲೆ ಹಾಗೂ ಹೆಗಡೆಯವರೂ ಸೇರಿದಂತೆ ಕೆಲವು ನಾಯಕರ ಮೇಲೆ ನಡೆಸಿದ ಹಲ್ಲೆಯ ನೇರ ಫಲಶ್ರುತಿ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ವೀರಪ್ಪನ್ ಬೇಡಿಕೆ ಪರಿಶೀಲನೆಯಲ್ಲಿ
ಕೊಯಮತ್ತೂರು, ಡಿ.20 (ಯುಎನ್ಐ)– ದಂತಚೋರ ವೀರಪ್ಪನ್ನ ಹತ್ತು ಬೇಡಿಕೆಗಳನ್ನು ತಮಿಳುನಾಡು ಸರ್ಕಾರ ಇನ್ನೂ ಪರಿಶೀಲಿಸುತ್ತಿದೆ ಎಂದು ಕೊಯಮತ್ತೂರು ಜಿಲ್ಲಾ ಕಲೆಕ್ಟರ್ ಸಿ.ವಿ. ಶಂಕರ್ ಇಂದು ತಿಳಿಸಿದರು.
ಒಂದು ಸಾವಿರ ಕೋಟಿ ರೂಪಾಯಿ ಬೇಡಿಕೆಯೂ ಸೇರಿದಂತೆ ಎಲ್ಲ ಬೇಡಿಕೆಗಳೂ ನಿಜವಾಗಿದ್ದು ಅವುಗಳ ಬಗ್ಗೆ ಕೆಲವರು ವ್ಯಕ್ತಪಡಿಸಿರುವ ಸಂಶಯ ಅನಗತ್ಯ ಎಂದು ಅವರು ಹೇಳಿದರು. ಡಿ. 3ರಂದು ಅಪಹರಿಸಲಾದ ಡಿಎಸ್ಪಿ ಚಿದಂಬರನಾಥನ್ ಮತ್ತು ಇನ್ನಿಬ್ಬರ ಬಿಡುಗಡೆಗೆ ಬದಲಾಗಿ ತನ್ನ ಹತ್ತು ಬೇಡಿಕೆಗಳನ್ನು ವೀರಪ್ಪನ್ ಮುಂದಿಟ್ಟಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.