ನವದೆಹಲಿ, ಏ. 16– ವಿಶ್ವಾಸಮತದ ಮೇಲಿನ ಮತದಾನಕ್ಕೆ ಮುನ್ನಾದಿನವಾದ ಇಂದು, ಡಿಎಂಕೆ ಮತ್ತು ಓಂಪ್ರಕಾಶ ಚೌತಾಲ ಅವರ ಇಂಡಿಯನ್ ನ್ಯಾಷನಲ್ ಲೋಕದಳವು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರಿಂದ ಹಾಗೂ ಬಿಎಸ್ಪಿ ತಟಸ್ಥ ನೀತಿ ಪ್ರಕಟಿಸಿದ್ದರಿಂದ, ಆಳುವ ಬಣ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಲೋಕಸಭೆಯಲ್ಲಿ ಮೂವರು ಸದಸ್ಯರನ್ನು ಹೊಂದಿರುವ ನ್ಯಾಷನಲ್ ಕಾನ್ಫರೆನ್ಸ್, ಸರ್ಕಾರಕ್ಕೆ ಬೆಂಬಲ ಘೋಷಿಸಿದೆ. ಅರುಣಾಚಲ ಕಾಂಗ್ರೆಸ್ನ ಒಬ್ಬರು, ಆರ್ಜೆಪಿಯ ಆನಂದ ಮೋಹನ್ ಮತ್ತು ಮಿಜೋರಾಂನ ಪಕ್ಷೇತರ ಸದಸ್ಯರೊಬ್ಬರು ಸರ್ಕಾರದ ಬೆಂಬಲಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಡಿಎಂಕೆಯ ಆರು, ಲೋಕದಳದ ನಾಲ್ಕು ಮಂದಿ ಸೇರಿದಂತೆ ಒಟ್ಟು ಹದಿಮೂರು ಸದಸ್ಯರ ಬೆಂಬಲ ಈಗ ದೊರೆಯುವ ಸಂಭವ ಇದೆ. ಎಐಎಡಿಎಂಕೆಯು ತನ್ನ ಹದಿನೆಂಟು ಮಂದಿ ಸದಸ್ಯರ ಬೆಂಬಲವನ್ನು ಹಿಂತೆಗೆದುಕೊಂಡದ್ದರಿಂದ, ಆಳುವ ಬಿಜೆಪಿ ನೇತೃತ್ವದ ಬಣದ ಸಂಖ್ಯಾಬಲವು 257ಕ್ಕೆ ಕುಸಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.