ರಾಜೀವ್ ಹತ್ಯೆಯಲ್ಲಿ ಡಿಎಂಕೆ ನಿರ್ದೋಷಿ: ಕರುಣಾನಿಧಿ ವಾದ
ನವದೆಹಲಿ, ನ. 21 (ಪಿಟಿಐ)– ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅನಗತ್ಯವಾಗಿ ಡಿಎಂಕೆಯನ್ನು ಸಿಲುಕಿಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪಿತೂರಿ ನಡೆಸಿದೆ ಎಂದು ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಇಂದು ಆಪಾದಿಸಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಜನಪರ ನೀತಿಯನ್ನು ಮುಂದಿಟ್ಟುಕೊಂಡು ಜನತೆಯ ಬಳಿಗೆ ಹೋಗಬೇಕೇ ಹೊರತು ಇನ್ನೊಂದು ಪಕ್ಷದ ಮೇಲೆ ಇಲ್ಲಸಲ್ಲದ ಆಪಾದನೆಯನ್ನು ಹೊರಿಸುವಂಥ ‘ಕೀಳು ರಾಜಕೀಯ ತಂತ್ರ’ವನ್ನು ಮುಂದಿಟ್ಟುಕೊಂಡು ಹೋಗುವುದು ಸರಿಯಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಬೇಡಿಕೆಗೆ ರಂಗ ತಿರಸ್ಕಾರ
ನವದೆಹಲಿ, ನ. 21– ಡಿಎಂಕೆಯ ಮೂವರು ಸಚಿವರನ್ನು ಸರ್ಕಾರದಿಂದ ಕೈಬಿಡಬೇಕೆಂಬ ಕಾಂಗ್ರೆಸ್ ಪಕ್ಷದ ಬೇಡಿಕೆಯನ್ನು ಸಂಯುಕ್ತ ರಂಗ ತಳ್ಳಿಹಾಕಿದೆ. ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಸೀತಾರಾಂ ಕೇಸರಿ ಅವರ ಜೊತೆ ಚರ್ಚಿಸಿ ಪರಿಹಾರ ಕಂಡುಹಿಡಿಯಲು ಸಂಯುಕ್ತರಂಗದ ಪ್ರಮುಖರ ಸಭೆಯು ಪ್ರಧಾನಿ ಐ.ಕೆ. ಗುಜ್ರಾಲ್ ಅವರಿಗೆ ಇಂದು ಅಧಿಕಾರ ನೀಡಿತು.
ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರು ರಾತ್ರಿ ಬರೆದ ಪತ್ರದ ಬಗೆಗೆ ಇಂದು ಸಂಯುಕ್ತ ರಂಗದ ಪ್ರಮುಖರ ಸಮಿತಿ ಚರ್ಚಿಸಿ, ಕಾಂಗ್ರೆಸ್ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿ ಸಂಯುಕ್ತ ರಂಗದಲ್ಲಿನ ಏಕತೆಯನ್ನು ಕಾಪಾಡಿಕೊಳ್ಳಲು ನಿರ್ಧರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.