ಕಾಂಗೈನಲ್ಲಿ ಬಿರುಗಾಳಿಯಾಗುತ್ತಿರುವ ನಾಯಕತ್ವ ಪ್ರಶ್ನೆ
ನವದೆಹಲಿ, ಮೇ 4– ಲೋಕಸಭೆ ಚುನಾವಣೆ ಮುಗಿಯುವ ದಿನ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ನಾಯಕತ್ವದ ಬಗೆಗೆ ಅಪಸ್ವರಗಳು ಕೇಳಿಬರಲು ಪ್ರಾರಂಭವಾಗಿರುವುದರಿಂದ, ಪಕ್ಷ ಅಧಿಕಾರಕ್ಕೆ ಬರಲಿ ಅಥವಾ ಬಾರದಿರಲಿ ನಾಯಕತ್ವದ ಬದಲಾವಣೆಯ ಪ್ರಶ್ನೆ ಒಂದು ಪ್ರಮುಖ ವಿವಾದವಾಗಲಿರುವ ಬೆಳವಣಿಗೆ ಸ್ಪಷ್ಟವಾಗಿ ಕಾಣುತ್ತಿದೆ.
ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದ್ದು, ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಪ್ರಧಾನಿ ಸ್ಥಾನವನ್ನು ಬೇರ್ಪಡಿಸುವ ಕಾಲವೀಗ ಬಂದಿದೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ಕೇಂದ್ರ ಕೈಗಾರಿಕಾ ಸಚಿವ ಕೆ.ಕರುಣಾಕರನ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಈಗ ಪಕ್ಷದ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಅವಕಾಶ ನೀಡಿದೆ. ನರಸಿಂಹ ರಾವ್ ನಾಯಕತ್ವ ಮುಂದುವರಿಯುವ ಬಗೆಗೆ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಚೀನಾ ರೇಷ್ಮೆ ತಡೆಗೆ ರಾಜ್ಯ ಕಾನೂನು ತಿದ್ದುಪಡಿ: ಸಚಿವರ ಘೋಷಣೆ
ಬೆಂಗಳೂರು, ಮೇ 4– ಭಾರೀ ಪ್ರಮಾಣದಲ್ಲಿ ಕಾನೂನುಬದ್ಧವಾಗಿ ಹಾಗೂ ಕಾನೂನುಬಾಹಿರವಾಗಿ ರಾಜ್ಯದೊಳಕ್ಕೆ ಪ್ರವೇಶಿಸುತ್ತಿರುವ ‘ಚೀನಾ ರೇಷ್ಮೆ’ಯಿಂದ ರಾಜ್ಯ ರೇಷ್ಮೆ ಉದ್ಯಮಕ್ಕೆ ಆಗುತ್ತಿರುವ ಆಘಾತವನ್ನು ತಪ್ಪಿಸಲು, ಸದ್ಯ ಇರುವ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ರಾಜ್ಯ ಸರ್ಕಾರ ಆಲೋಚಿಸುತ್ತಿದೆ ಎಂದು ಸಚಿವ ನಾಗರಾಜಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.