ದಳ ಮೇಲುಗೈ: ಪಕ್ಷೇತರರೇ ನಿರ್ಣಾಯಕ
ಬೆಂಗಳೂರು, ಜ. 8– ರಾಜ್ಯದ ಪೌರ ಸಂಸ್ಥೆಗಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಹೆಚ್ಚಿನ ಕಡೆ ಆಡಳಿತಾರೂಢ ಜನತಾದಳ ಮೇಲುಗೈ ಸಾಧಿಸಿದೆ. ಆದರೆ ಪಕ್ಷೇತರರು ಗಣನೀಯ ಸ್ಥಾನ ಗಳಿಸಿರುವುದರಿಂದ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಚುನಾವಣೆ ನಡೆದ ನಾಲ್ಕು ಮಹಾನಗರ ಪಾಲಿಕೆಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದೇ ಇದ್ದರೂ ಮೈಸೂರು ಹಾಗೂ ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ದಳ ಹೆಚ್ಚಿನ ಸ್ಥಾನ ಗಳಿಸಿದ್ದು, ಅಧಿಕಾರ ಸೂತ್ರ ಹಿಡಿಯುವ ಸಾಧ್ಯತೆಗಳಿವೆ.
ಬೆಂಗಳೂರು ಬಂದ್ ಪೂರ್ಣ ಯಶಸ್ವಿ
ಬೆಂಗಳೂರು, ಜ. 8– ಪ್ರಧಾನಿ ಸೂಚನೆಯಂತೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಕ್ರಮವನ್ನು ಪ್ರತಿಭಟಿಸಲು ‘ಕೃಷ್ಣಾ– ಕಾವೇರಿ ಹೋರಾಟ’ಕ್ಕೆ ಕರೆ ನೀಡಿದ್ದ ಬೆಂಗಳೂರು ಬಂದ್ ಇಂದು ಸಂಪೂರ್ಣ ಯಶಸ್ವಿಯಾಯಿತು. ವ್ಯಾಪಕ ಬಂದೋಬಸ್ತ್ ನಡುವೆಯೇ ನಡೆದ ಕಲ್ಲು ತೂರಾಟ ಹಾಗೂ ಬೆಂಕಿ ಹಚ್ಚಿದ ಕೆಲವು ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದಂತೆ ಬಂದ್ ಶಾಂತಿಯುತವಾಗಿತ್ತು.
ರಾಜ್ಯ ಸಾರಿಗೆ ಸಂಸ್ಥೆಯ ಕೆಲವು ಬಸ್ಸುಗಳೂ ಸೇರಿದಂತೆ ಸುಮಾರು 40 ವಾಹನಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಕಲ್ಲು ತೂರಾಟದಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜಾಜಿನಗರದಲ್ಲಿ ಅಗರಬತ್ತಿ ಕಾರ್ಖಾನೆಗೆ ಹಾಗೂ ವಿಜಯನಗರದಲ್ಲಿ ವ್ಯಾನೊಂದಕ್ಕೆ ಬೆಂಕಿ ಹಚ್ಚಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.