ನರಸಿಂಹ ರಾವ್ ಬಂಧನದ ಆಜ್ಞೆಗೆ ಹೈಕೋರ್ಟ್ ತಡೆ
ನವದೆಹಲಿ, ಅ. 4 (ಯುಎನ್ಐ, ಪಿಟಿಐ)– ಸೇಂಟ್ ಕಿಟ್ಸ್ ಫೋರ್ಜರಿ ಹಗರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಸೇರಿದಂತೆ ನಾಲ್ವರ ಬಂಧನಕ್ಕೆ ದೆಹಲಿ ನ್ಯಾಯಾಲಯ ಇಂದು ಜಾಮೀನುರಹಿತ ವಾರೆಂಟ್ ಹೊರಡಿಸಿತು. ಆದರೆ, ರಾವ್ ಅವರ ವಿರುದ್ಧ ಅ. 7ರವರೆಗೆ ಈ ಆದೇಶ ಜಾರಿಗೊಳಿಸದಂತೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬಂಧನದ ಶಂಕೆಯಿಂದ ನರಸಿಂಹ ರಾವ್ ಅವರು ದೆಹಲಿ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿ ದ್ದರು. ಇಂದು ಸಂಜೆ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಎಸ್.ಕೆ. ಮಹಾಜನ್ ಅವರು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಜಾರಿಗೊಳಿಸಿದ್ದ ಜಾಮೀನುರಹಿತ ವಾರೆಂಟ್ಗೆ ಸೋಮವಾರದವರೆಗೆ ತಡೆಯಾಜ್ಞೆ ನೀಡಿದರು. ಸಿಬಿಐಗೆ ನೊಟೀಸ್ ಜಾರಿಗೊಳಿಸಿ ಅರ್ಜಿಯ ವಿಚಾರಣೆಯನ್ನು ಅ.7ಕ್ಕೆ ಮುಂದೂಡಿದರು.
ಉಗ್ರಗಾಮಿಗಳ ವಶದಲ್ಲಿದ್ದ ಪಾಲಕ್ಕಾಡ್ ಜಿಲ್ಲಾಧಿಕಾರಿ ಬಿಡುಗಡೆ
ಪಾಲಕ್ಕಾಡ್, ಅ. 4 (ಪಿಟಿಐ)– ಪಾಲಕ್ಕಾಡ್ ಜಿಲ್ಲಾಧಿಕಾರಿ ಡಬ್ಲ್ಯು.ಆರ್. ರೆಡ್ಡಿ ಅವರನ್ನು ಬೆಳಿಗ್ಗೆ 11ಗಂಟೆಯಿಂದ ದಿಗ್ಬಂಧನದಲ್ಲಿರಿಸಿದ್ದ ನಾಲ್ವರು ಸಶಸ್ತ್ರ ಶಂಕಿತ ಉಗ್ರಗಾಮಿಗಳ ಗುಂಪು ರಾತ್ರಿ 8 ಗಂಟೆಗೆ ಅವರನ್ನು ಬಿಡುಗಡೆ ಮಾಡಿತು.
ಉಗ್ರರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಆಶ್ವಾಸನೆಯನ್ನು ಜಿಲ್ಲಾಧಿ ಕಾರಿ ರೆಡ್ಡಿ ಅವರು ನೀಡಿದ ನಂತರ, ಅವರ ಕಚೇರಿಯಲ್ಲಿ ಮುಂಜಾನೆಯಿಂದ ಅವರನ್ನು ಹಿಡಿದಿಟ್ಟುಕೊಂಡಿದ್ದ ಉಗ್ರರು ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.