ADVERTISEMENT

25 ವರ್ಷಗಳ ಹಿಂದೆ: ಸೋಮವಾರ 07-10-1996

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 14:37 IST
Last Updated 6 ಅಕ್ಟೋಬರ್ 2021, 14:37 IST
   

ಕಾಂಗ್ರೆಸ್ ಕಾರ್ಯಕಾರಿಣಿಗೆ ಮನಮೋಹನ ಸಿಂಗ್

ನವದೆಹಲಿ, ಅ. 6 (ಪಿಟಿಐ)– ಮಾಜಿ ಹಣಕಾಸು ಸಚಿವ ಮನಮೋಹನ ಸಿಂಗ್ ಅವರನ್ನು ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕ ಮಾಡ ಲಾಗಿದೆ. ಪಿ.ವಿ.ನರಸಿಂಹ ರಾವ್ ಅವರು ಪಕ್ಷದ ಸಂಸದೀಯ ನಾಯಕನ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದು, ಆ ಸ್ಥಾನಕ್ಕೆ ಮನಮೋಹನ ಸಿಂಗ್ ಅವರನ್ನೇ ನೇಮಿಸ ಲಾಗುವುದು ಎಂಬ ದಟ್ಟ ಸುದ್ದಿ ಕಾಂಗ್ರೆಸ್ ವಲಯದಲ್ಲಿ ಹಬ್ಬಿದೆ.

ಪಕ್ಷದಲ್ಲಿ ಅತ್ಯುನ್ನತ ಅಧಿಕಾರ ಹೊಂದಿ ರುವ ಕಾರ್ಯಕಾರಿ ಸಮಿತಿಗೆ ಮನಮೋಹನ ಸಿಂಗ್ ಅವರ ನೇಮಕ ಮಾಡಿದ ಮಹತ್ವದ ನಿರ್ಧಾರವನ್ನು ಇಂದು ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರೇ ಪ್ರಕಟಿಸಿದರು. ಆದರೆ ನರಸಿಂಹ ರಾವ್ ಅವರ ಸ್ಥಾನದಲ್ಲಿ ಮನಮೋಹನ್ ಸಿಂಗ್ ಅವರು ಸಂಸದೀಯ ಪಕ್ಷದ ನಾಯಕರಾಗಿ ನೇಮಕವಾಗುತ್ತಾರೆ ಎಂಬ ವರದಿಗಳನ್ನು ದೃಢಪಡಿಸಲು ಅಥವಾ ಅಲ್ಲಗಳೆಯಲು ಸೀತಾರಾಂ ಕೇಸರಿ ಅವರು ನಿರಾಕರಿಸಿದ್ದಾರೆ.

ADVERTISEMENT

ಸಂಪುಟ ಪುನರ್‌ರಚನೆ ಇಲ್ಲ ಪಟೇಲ್ ಸ್ಪಷ್ಟನೆ

ಕಾರವಾರ, ಅ. 6– ಪ್ರಸಕ್ತ ಉಪ ಚುನಾ ವಣೆಯ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಜೆ.ಎಚ್. ಪಟೇಲ್, ಸಂಪುಟ ಪುನರ್‌ರಚನೆಯಾಗಲಿ ಅಥವಾ ಖಾತೆಗಳ ಬದಲಾವಣೆಯಾಗಲಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಮುರ್ಡೇಶ್ವರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರ‍್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಅಭಿವೃದ್ಧಿಯತ್ತ ಹೆಚ್ಚಿಗೆ ಗಮನ ಕೊಡಲು ಸಾಧ್ಯವಾಗಲಿಲ್ಲ ಎಂದರು.

ಕಳೆದ ಲೋಕಸಭೆ ಚುನಾವಣೆ, ಕೃಷ್ಣಾ, ಕಾವೇರಿ ವಿವಾದ ಕುರಿತು ತಾವು ಪದೇ ಪದೇ ದೆಹಲಿಗೆ ಪ್ರಯಾಣಿಸಬೇಕಾಗಿದ್ದರಿಂದ ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡಲು ತಮಗೆ ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ಎಲ್ಲ ಸಚಿವರು ಹೋಬಳಿ ಮಟ್ಟದಲ್ಲಿನ ಜನರನ್ನು ಸಂಪರ್ಕಿಸಿ ಅಭಿವೃದ್ಧಿ ಕಾರ್ಯಕ್ರಮಗಳ ಆದಿಯತ್ತ ಹೆಚ್ಚು ಲಕ್ಷ್ಯ ನೀಡುವಂತೆ ತಾವು ಎಲ್ಲ ಸಚಿವರಿಗೆ ಹೆಚ್ಚಿನ ಕೆಲಸ ಮತ್ತು ಜವಾಬ್ದಾರಿ ಹೊರಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.