ಶನಿವಾರ 18/7/1998
ಬೆಂಗಳೂರು, ಜುಲೈ 17– ವಿದ್ಯುತ್ ದರ ಏರಿಕೆ ಕ್ರಮವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಇಲ್ಲವೇ ಈ ಬಗ್ಗೆ ಚರ್ಚಿಸಲು ತುರ್ತಾಗಿ ಜನತಾ ದಳದ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಆಡಳಿತ ಪಕ್ಷದ ಶಾಸಕರ ಗುಂಪೊಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರನ್ನು ಆಗ್ರಹಪಡಿಸಿದೆ.
ಈ ಸಭೆ ನಡೆಯುವವರೆಗೆ ಜನರ ಹಾಗೂ ಪಕ್ಷದ ಹಿತದೃಷ್ಟಿಯಿಂದ ದರ ಏರಿಕೆಯನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ದರ ಏರಿಸುವ ಮಂಡಳಿಯ ದಿಢೀರ್ ನಿರ್ಧಾರಕ್ಕೆ ಒಬ್ಬರು ಸಚಿವರೂ ಸೇರಿದಂತೆ ಹದಿನೈದಕ್ಕೂ ಹೆಚ್ಚು ಜನತಾ ದಳದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತುರುವೇಕೆರೆ ಕ್ಷೇತ್ರದ ಶಾಸಕ ಹಾಗೂ ಮೈಸೂರು ಮಿನರಲ್ಸ್ ಸಂಸ್ಥೆಯ ಅಧ್ಯಕ್ಷ ಎಚ್.ಬಿ. ನಂಜೇಗೌಡ ಅವರ ಮನೆಯಲ್ಲಿ ಗುರುವಾರ ರಾತ್ರಿ ಸಭೆ ಸೇರಿದ ಆಡಳಿತ ಪಕ್ಷದ ಶಾಸಕರು ವಿದ್ಯುತ್ ದರ ಏರಿಕೆ ಸಂಬಂಧ ಸುದೀರ್ಘವಾಗಿ ಚರ್ಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ. ವಯಸ್ಕರ ಶಿಕ್ಷಣ ಸಚಿವ ಆರ್. ಕೃಷ್ಣಪ್ಪ ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದರು.
ನವದೆಹಲಿ, ಜುಲೈ 17 (ಯುಎನ್ಐ)– ಮಹಾತ್ಮಗಾಂಧಿ ಹತ್ಯೆ ಘಟನೆಯನ್ನು ವೈಭವೀಕರಿಸುವ ವಿವಾದಾತ್ಮಕ ಮರಾಠಿ ನಾಟಕ ‘ಮೇ ನಾಥೂರಾಂ ಗೋಡ್ಸೆ ಬೋಲ್ತಾಯ್’ ನಾಟಕ ಪ್ರದರ್ಶನವನ್ನು ನಿಷೇಧಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸಲಹೆ ಮಾಡಿದ್ದಾಗಿ ಗೃಹ ಸಚಿವ ಎಲ್.ಕೆ. ಅಡ್ವಾಣಿ ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಮನೋಹರ ಜೋಷಿ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಈ ಸಲಹೆ ನೀಡಿದ್ದಾಗಿ ಸದನದಲ್ಲಿ ಹೇಳಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.