ಅತಿ ದೊಡ್ಡ ಬಣವಾಗಿ ಬಿಜೆಪಿ ಮೈತ್ರಿಕೂಟ
ನವದೆಹಲಿ, ಮಾರ್ಚ್ 2 (ಪಿಟಿಐ, ಯುಎನ್ಐ)– 12ನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಜನತಾದಳ ದೂಳೀಪಟವಾಗಿದೆ. ಬಿಜೆಪಿ–ಲೋಕಶಕ್ತಿ ಮೈತ್ರಿಕೂಟ ಅಭೂತಪೂರ್ವ ವಿಜಯ ಸಾಧಿಸಿದೆ. ದೇಶದ ವಿವಿಧ ರಾಜ್ಯಗಳ 512 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿ ಇದ್ದು, 239 ಕ್ಷೇತ್ರಗಳಲ್ಲಿ ಮುನ್ನಡೆದಿರುವ ಬಿಜೆಪಿ ಮೈತ್ರಿಕೂಟ ಅತಿದೊಡ್ಡ ಬಣವಾಗಿ ಹೊರಹೊಮ್ಮುವುದು ಖಚಿತವಾಗಿದೆ. ಕಾಂಗ್ರೆಸ್ ಪಕ್ಷ 159 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಸಂಯುಕ್ತರಂಗವು 96ರಲ್ಲಿ ಮುಂದಿದೆ. ಇತರ ಪಕ್ಷಗಳು 18ರಲ್ಲಿ ಗೆಲ್ಲುವ ಹಾದಿಯಲ್ಲಿವೆ.
ರಾಜೀನಾಮೆ ಬೇಡ– ಪಟೇಲ್ಗೆ ಸಲಹೆ
ಬೆಂಗಳೂರು, ಮಾರ್ಚ್ 2– ಲೋಕಸಭಾ ಚುನಾವಣಾ ಫಲಿತಾಂಶ ಕುರಿತಂತೆ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ತಮ್ಮ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳೊಂದಿಗೆ ಇಂದು ರಾತ್ರಿ ಸುದೀರ್ಘ ಚರ್ಚೆ ನಡೆಸಿದರು.
ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಸಚಿವರು, ಈ ಚುನಾವಣೆಯಲ್ಲಿ ಜನತಾದಳ ಪರಾಭವಗೊಂಡಿದ್ದರೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬಾರದೆಂದು ಒತ್ತಾಯಿಸಿದರು ಎಂದು ತಿಳಿದುಬಂದಿದೆ. ಈ ಫಲಿತಾಂಶ ರಾಜ್ಯ ಸರ್ಕಾರದ ವಿರುದ್ಧ ಬಂದಿರುವ ಜನಾದೇಶ ಅಲ್ಲ ಎಂದು ಸಚಿವರು ಹೇಳಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.