‘ಅಧಿಕ ಸ್ಥಾನ ಗೆಲ್ಲಿಸುವ ಹೊಣೆ ಪಟೇಲ್ಗೆ’
ಬೆಂಗಳೂರು, ನ. 11– ಮುಂದಿನ ಜನವರಿ ಅಥವಾ ಫೆಬ್ರುವರಿ ಹೊತ್ತಿಗೆ ಲೋಕಸಭೆಗೆ ಮಧ್ಯಂತರ ಚುನಾವಣೆಗಳು ಬರುವ
ಇಂಗಿತ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ದಿಕ್ಕಿನಲ್ಲಿ ಪಕ್ಷ ಸಂಘಟಿತ ಪ್ರಯತ್ನ ನಡೆಸಲು ಸಜ್ಜಾಗಬೇಕು ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರಿಗೆ ಸಂಪೂರ್ಣ ಜವಾಬ್ದಾರಿಯನ್ನು ಹೊರಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಕೃಷಿ ಸಚಿವ ಸಿ. ಬೈರೇಗೌಡ ಅವರು, ‘ದೇವೇಗೌಡ ಮತ್ತು ಪಟೇಲರು ನಿನ್ನೆ ರಾತ್ರಿ ‘ಅನುಗ್ರಹ’ದಲ್ಲಿ ನಡೆಸಿದ ಸುದೀರ್ಘ ಚರ್ಚೆ ಸಂದರ್ಭದಲ್ಲಿ ‘ನಾನೂ ಅಲ್ಲಿದ್ದೆ’. ಮಾಜಿ ಪ್ರಧಾನಿ ಅವರು ತಮ್ಮ ಬಳಿ ಶಾಸಕರು ಹೇಳಿಕೊಂಡಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿ ಅವರಿಗೆ ವಿವರಿಸಿ ಅವನ್ನು ಪರಿಹರಿಸಲು ಸೂಚಿಸಿದರು’ ಎಂದು ಹೇಳಿದರು.
ಕಾವೇರಿ ಪ್ರಾಧಿಕಾರ ರಚನೆ ಜನವರಿ 6ರ ವರೆಗೆ ಗಡುವು
ನವದೆಹಲಿ, ನ. 11– ಕಾವೇರಿ ಜಲ ವಿವಾದ ಗಳ ನ್ಯಾಯಮಂಡಳಿಯ ಮಧ್ಯಂತರ ವರದಿ ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೇಂದ್ರ ಸರ್ಕಾರವು ರೂಪಿಸಿರುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸುಪ್ರೀಂಕೋರ್ಟ್ ಮತ್ತೆ ಜನವರಿ 6ರ ವರೆಗೆ ಗಡುವು ನೀಡಿತು.
ಕೇಂದ್ರ ಸರ್ಕಾರವು ಈಗಾಗಲೇ ಕಾವೇರಿ ನದಿ ನೀರು ಪ್ರಾಧಿಕಾರ ರಚನೆಯನ್ನು ಕೈಗೆತ್ತಿಕೊಂಡಿದ್ದು, ಈ ಬಗೆಗೆ ಮುಖ್ಯವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಒಮ್ಮತ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಆದ್ದರಿಂದ ಈ ಯೋಜನೆಯನ್ನು ರೂಪಿಸಿದ್ದರೂ, ಜಾರಿಗೆ ತರುವಲ್ಲಿ ವಿಳಂಬವಾಗಿದೆ ಎಂದು ಅಟಾರ್ನಿ ಜನರಲ್ ಅಶೋಕ್ ದೇಸಾಯಿ ಇಂದು ಈ ಪ್ರಕರಣದ ಬಗೆಗೆ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಮತ್ತು ನ್ಯಾಯಮೂರ್ತಿ ಬಿ.ಎನ್. ಕೃಪಾಲ್ ಅವರ ನ್ಯಾಯಪೀಠಕ್ಕೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.