ಬೆಳಗಾವಿ, ನಲಗೊಂಡ ಚುನಾವಣೆ ಮುಂದಕ್ಕೆ
ನವದೆಹಲಿ, ಏ. 9– ಚುನಾವಣಾ ಇತಿಹಾಸದಲ್ಲೇ ಅಪರೂಪವೆನ್ನಲಾದ, ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿರುವ ಕರ್ನಾಟಕದ ಬೆಳಗಾವಿ, ಆಂಧ್ರ ಪ್ರದೇಶದ ನಲಗೊಂಡ ಲೋಕಸಭಾ ಕ್ಷೇತ್ರಗಳು ಮತ್ತು ತಮಿಳುನಾಡಿನ ಮಡುಕುರುಚಿ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನು ಒಂದು ತಿಂಗಳವರೆಗೆ ಮುಂದೂಡುವ ನಿರ್ಧಾರವನ್ನು ಚುನಾವಣಾ ಆಯೋಗ ಇಂದು ಕೈಗೊಂಡಿತು.
ಅಭ್ಯರ್ಥಿಗಳು ಅತಿ ಹೆಚ್ಚಾಗಿರುವುದರಿಂದ ಈ ಮೂರು ಕ್ಷೇತ್ರಗಳಲ್ಲಿ ಮುಕ್ತ ಹಾಗೂ ನ್ಯಾಯಯುತ ಚುನಾವಣೆ ನಡೆಸಲು ಉಂಟಾಗುವ ಆಡಳಿತಾತ್ಮಕ ಮತ್ತಿತರ ತೊಂದರೆಗಳ ಬಗ್ಗೆ ಅವಲೋಕಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯುಕ್ತ ಜಿ.ವಿ.ಜಿ. ಕೃಷ್ಣಮೂರ್ತಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯಸಭೆ: ಲೀಲಾದೇವಿ ಉಭಯಸಂಕಟ
ಬೆಂಗಳೂರು, ಏ. 9– ಜನತಾದಳದ ಹಿರಿಯ ಮುಖಂಡ, ಆಂಧ್ರ ಪ್ರದೇಶದ ಜೈಪಾಲ್ ರೆಡ್ಡಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಲು ತೆರೆಮರೆಯಲ್ಲಿ ಸನ್ನಾಹ ನಡೆದಿದೆ. ಅವರಿಗೆ ಅವಕಾಶ ಕಲ್ಪಿಸಲು ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿರುವ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರಿಂದ ರಾಜೀನಾಮೆ ಕೊಡಿಸಲು ದಳದ ಕೆಲವು ಮುಖಂಡರು ತೀವ್ರ ಪ್ರಯತ್ನ ನಡೆಸಿದ್ದಾರೆ.
ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ರಾಜ್ಯಸಭೆಗೆ ಸ್ಪರ್ಧಿಸಿ ಆಯ್ಕೆಯಾದ ಲೀಲಾದೇವಿ ಪ್ರಸಾದ್ ಅವರು, ಸಂಸತ್ ಸದಸ್ಯೆಯಾಗಿ ದೆಹಲಿಗೆ ಹೋಗಬೇಕೋ ಅಥವಾ ಮಂತ್ರಿಯಾಗಿ ರಾಜ್ಯದಲ್ಲೇ ಉಳಿಯಬೇಕೋ ಎಂಬ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.