ADVERTISEMENT

25 ವರ್ಷಗಳ ಹಿಂದೆ: ಬುಧವಾರ, ಡಿಸೆಂಬರ್‌ 25, 1996

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 19:30 IST
Last Updated 24 ಡಿಸೆಂಬರ್ 2021, 19:30 IST
   

ತುರ್ತು ಅಧಿವೇಶನಕ್ಕೆ ಪ್ರತಿಪಕ್ಷಗಳ ಒತ್ತಡ
ಬೆಂಗಳೂರು, ಡಿ.24–
ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳ ಮುಖಂಡರು, ಚರ್ಚೆಗಾಗಿ ಕೂಡಲೇ ವಿಧಾನಸಭೆಯ ಅಧಿವೇಶನ ಕರೆಯುವಂತೆ ಒತ್ತಾಯಿಸಲು ರಾಜ್ಯಪಾಲರು ಹಾಗೂ ವಿಧಾನಸಭೆಯ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಮೊದಲ ಹಂತವಾಗಿ ಡಿಸೆಂಬರ್‌ 27ರಂದು ವಿಧಾನಸಭೆಯ ಅಧ್ಯಕ್ಷರನ್ನು ಭೇಟಿ ಮಾಡಿ ಅಧಿವೇಶನ ಕರೆಯುವಂತೆ ಒತ್ತಾಯಿಸಲಾಗುವುದು. ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಅರ್ಪಿಸಲಾಗುವುದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಧರ್ಮಸಿಂಗ್‌, ಬಿಜೆಪಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ರಾಮಚಂದ್ರಗೌಡ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ವಾಟಾಳ್‌ ನಾಗರಾಜ್‌ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್‌ ಡಿ.ಬಿ.ಚಂದ್ರೇಗೌಡ ಇಂದು ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜೆ.ಎಚ್‌.ಪಟೇಲ್‌ ನೇತೃತ್ವದ ರಾಜ್ಯ ಜನತಾದಳ ಸರ್ಕಾರ ಶಾಸನ ಸಭೆಯ ಅಧಿವೇಶನವನ್ನೇ ಕರೆಯದೆ ಜನತಂತ್ರ ವ್ಯವಸ್ಥೆಯ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿರುವುದರಿಂದ ವಿರೋಧ ಪಕ್ಷಗಳು ರಾಜ್ಯಪಾಲರು ಮತ್ತು ವಿಧಾನಸಭೆಯ ಅಧ್ಯಕ್ಷರ ಮೊರೆ ಹೊಗಲು ತೀರ್ಮಾನಿಸಿವೆ ಎಂದು ಅವರು ಹೇಳಿದರು.

ADVERTISEMENT

ಕೇಸರಿ ನಾಯಕತ್ವಕ್ಕೆ ಜೆ.ಬಿ.ಪಟ್ನಾಯಕ್‌ ಬೆಂಬಲ
ನವದೆಹಲಿ, ಡಿ. 24 (ಯುಎನ್‌ಐ)–
ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಇರಬೇಕೆಂಬ ವಾದವನ್ನು ಇಂದು ತಿರಸ್ಕರಿಸಿದ ಒರಿಸ್ಸಾದ ಮುಖ್ಯಮಂತ್ರಿ ಜೆ.ಬಿ.ಪಟ್ನಾಯಕ್‌, ‘ಪಕ್ಷದ ಹಿತದೃಷ್ಟಿಯಿಂದ ಪಕ್ಷದೊಳಗೆ ಒಂದೇ ಅಧಿಕಾರ ಕೇಂದ್ರ ಇರುವುದು ಸೂಕ್ತ’ ಎಂದು ಹೇಳಿದ್ದಾರೆ.

ಈ ಮೂಲಕ ಪಕ್ಷದ ಸಂಸದೀಯ ನಾಯಕನ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ತಮ್ಮ ಬೆಂಬಲ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿಯವರಿಗೆ ಎಂಬುದನ್ನು ಜೆ.ಬಿ.ಪಟ್ನಾಯಕ್‌ ಅವರು ಸ್ಪಷ್ಟಪಡಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.