ಏಳು ಹೊಸ ಜಿಲ್ಲೆ ರಚನೆಗೆ ಸಂಪುಟ ಸಭೆ ಒಪ್ಪಿಗೆ
ಬೆಂಗಳೂರು, ಜೂನ್ 6– ದಾವಣಗೆರೆ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ ಮತ್ತು ಉಡುಪಿ ಕೇಂದ್ರ ವಾಗುಳ್ಳ ಏಳು ಹೊಸ ಜಿಲ್ಲೆಗಳ ರಚನೆಗೆ ಸಚಿವ ಸಂಪುಟ ಸಭೆಯು ಇಂದು ಒಪ್ಪಿಗೆ ನೀಡಿತು. ಇವುಗಳಲ್ಲಿ ಒಂದೆರಡು ಜಿಲ್ಲೆಗಳು ಆಗಸ್ಟ್ 15ರಂದು ಉದ್ಘಾಟನೆಯಾಗಲಿವೆ.
ಈ ವಿಷಯವನ್ನು ವಾರ್ತಾ ಸಚಿವ ಎಂ.ಸಿ. ನಾಣಯ್ಯ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಕಲ್ಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ರಚಿಸಲಾಗುವ ಎರಡು ಹೊಸ ಜಿಲ್ಲೆಗಳ ಬಗೆಗೆ ಪರಿಶೀಲನೆ ನಡೆಸಿ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದರು.
ಜೆ.ಎಚ್. ಪಟೇಲ್ಗೆ ಹೆಗಡೆ ಎಚ್ಚರಿಕೆ
ಬೆಂಗಳೂರು, ಜೂನ್ 6– ಜನತಾದಳದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಕಾವಿನ ಬಿಸಿ ರಾಜ್ಯ ಜನತಾದಳಕ್ಕೂ ತಟ್ಟಿದ್ದು, ಹಾಲಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅಥವಾ ಹಾಲಿ ಕಾರ್ಯಾಧ್ಯಕ್ಷ ಶರದ್ ಯಾದವ್ ಇಬ್ಬರಲ್ಲಿ ಯಾರಪರ ಒಲವು ತೋರಬೇಕೆಂಬ ಜಿಜ್ಞಾಸೆ ಉಂಟಾಗಿದೆ.
ಅಧ್ಯಕ್ಷ ಆಯ್ಕೆಯಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯದ ಅವಕಾಶ ಉಪಯೋಗಿಸಿ ಕೊಂಡು ಗೌಡರ ಹಿಡಿತದಿಂದ ಹೊರಬಂದು ತಮ್ಮದೇ ಅದ ನಿಲುವನ್ನು ತಾಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಶಕ್ತಿಯ ಅಧ್ಯಕ್ಷ ರಾಮಕೃಷ್ಣ ಹೆಗಡೆ ಪಟೇಲರಿಗೆ ಸೂಚನೆ ನೀಡಿದ್ದಾರೆಂಬ ವದಂತಿ ಹಬ್ಬಿದೆ.
ನೀವು (ಪಟೇಲರು) ಗೌಡರಿಗೆ ಅಂಟಿಕೊಂಡು, ಕೊನೆಗೆ ಲಾಲೂ ಅಧ್ಯಕ್ಷರಾದರೆ ರಾಜ್ಯ ಸರ್ಕಾರಕ್ಕೆ ಅಪಾಯ ತಪ್ಪಿದ್ದಲ್ಲ ಎಂಬ ಎಚ್ಚರಿಕೆಯನ್ನು ಹೆಗಡೆಯವರಿಗೆ ಪಟೇಲರಿಗೆ ಪರೋಕ್ಷವಾಗಿ ನೀಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.