ಮಾನ್ಯತೆಗೆ ತಾಲಿಬ್ ಉಗ್ರರ ಮನವಿ
ಕಾಬೂಲ್, ಸೆ. 28 (ರಾಯಿಟರ್ಸ್)– ಅಫ್ಗಾನಿಸ್ತಾನದ ಹೊಸ ಸರ್ಕಾರಕ್ಕೆ ಮಾನ್ಯತೆ ನೀಡುವಂತೆ, ರಾಜಧಾನಿಯನ್ನು ವಶಪಡಿಸಿ ಕೊಂಡಿರುವ ತಾಲಿಬ್ ಉಗ್ರಗಾಮಿಗಳು ಅಂತರರಾಷ್ಟ್ರೀಯ ಸಮುದಾಯದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ, ಹಿಂದಿನ ಕಮ್ಯುನಿಸ್ಟ್ ಸರ್ಕಾರದ ಇನ್ನಿಬ್ಬರು ಅಧಿಕಾರಿಗಳನ್ನು ನೇಣಿಗೇರಿಸಲಾಗಿದೆ ಎಂದು ನೂತನ ಸರ್ಕಾರ ಹೇಳಿಕೊಂಡಿದೆ.
‘ಇಸ್ಲಾಂ ದೇಶವೆಂದು ಅಫ್ಗಾನಿಸ್ತಾನ ವನ್ನು ಪರಿಗಣಿಸಬೇಕೆಂದು ನಾವು ಅಂತರರಾಷ್ಟ್ರೀಯ ಸಮುದಾಯವನ್ನು ಕೇಳಿಕೊಳ್ಳುತ್ತೇವೆ’ ಎಂದು ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯ ವಕ್ತಾರ ವಾಕಿಲ್ ಅಹ್ಮದ್ ಅವರು ದಕ್ಷಿಣ ಅಫ್ಗನ್ನಲ್ಲಿರುವ ಕಂದಹಾರ್ ಪಟ್ಟಣದಿಂದ ದೂರವಾಣಿ ಮೂಲಕ ಸುದ್ದಿಸಂಸ್ಥೆ ಜೊತೆ ಮಾತನಾಡುತ್ತಾ ತಿಳಿಸಿದರು.
ತಿಹಾರ್ ಜೈಲಿಗೆ ಸುಖ್ರಾಂ
ನವದೆಹಲಿ, ಸೆ. 28 (ಯುಎನ್ಐ, ಪಿಟಿಐ)– ಕೇಂದ್ರದ ಸಂಪರ್ಕ ಖಾತೆ ಮಾಜಿ ಸಚಿವ ಸುಖ್ರಾಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಶೇಷ ನ್ಯಾಯಾಧೀಶ ಅಜಿತ್ ಭಾರಿಹೋಕ್ ಅವರು, ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣದ ಜಾಮೀನು ಅರ್ಜಿಯ ತೀರ್ಪನ್ನು ಅ.1ಕ್ಕೆ ಕಾಯ್ದಿರಿಸಿದರು. ನಂತರ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಯಿತು.
ರಾಜ್ಯದ ಹಣಕಾಸು ಸ್ಥಿತಿ ಉತ್ತಮ ಸಿದ್ದರಾಮಯ್ಯ
ಬೆಂಗಳೂರು, ಸೆ. 28– ರಾಜ್ಯ ಸರ್ಕಾರದ ಹಣಕಾಸಿನ ನಿರ್ವಹಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ 1995–96ನೇ ಸಾಲಿನಲ್ಲಿ ಒಮ್ಮೆಯೂ ಕೂಡ ‘ಓವರ್ ಡ್ರಾಫ್ಟ್’ ಪಡೆದಿಲ್ಲ. ರಿಸರ್ವ್ ಬ್ಯಾಂಕ್ನಿಂದಲೂ ರಾಜ್ಯ ಪ್ರಶಂಸೆಯನ್ನು ಗಳಿಸಿದೆ ಎಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇಲ್ಲಿ ತಿಳಿಸಿದರು.
ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಜಂಟಿಯಾಗಿ ನಡೆಸಿದ ಪತ್ರಿಕಾ ಸಂದರ್ಶನ ಕಾರ್ಯಕ್ರಮ
ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಆರ್ಥಿಕ ವರ್ಷದಲ್ಲಿ ರಾಷ್ಟ್ರದ ಆರ್ಥಿಕ ಬೆಳವಣಿಗೆ ಶೇ 4.8ರಷ್ಟು ಇದ್ದಾಗ ರಾಜ್ಯದಲ್ಲಿ ಇದರ ಪ್ರಮಾಣ ಶೇ 5.3ರಷ್ಟು ದಾಖಲೆಯಾಗಿದೆ. ಇದೇ ರೀತಿಯಲ್ಲಿ ತಲಾ ವೆಚ್ಚ ಸೇರಿ ರಾಜ್ಯವು ರಾಷ್ಟ್ರದಲ್ಲೇ ಪ್ರಥಮ ಸ್ಥಾನ ಗಳಿಸಿರುವುದನ್ನು ಯೋಜನಾ ಆಯೋ ಗವೇ ಹೇಳಿದೆ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.