ದಾರಿದ್ರ್ಯ, ಶೋಷಣೆ ದೊಡ್ಡ ಹಿಂಸೆ: ಶರ್ಮಾ
ಚಾವುಂಡರಾಯ ಮಂಟಪ (ಶ್ರವಣ ಬೆಳಗೊಳ), ಡಿ. 2– ಶೋಷಣೆ ಮತ್ತು ದಾರಿದ್ರ್ಯ ಅತಿ ದೊಡ್ಡ ಹಿಂಸೆ ಎಂದು ಇಂದು ಇಲ್ಲಿ ವರ್ಣಿಸಿದ ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮಾ ಅವರು ಜೈನ ಧರ್ಮದ ಮೂಲತತ್ವ ಅಹಿಂಸೆಯನ್ನು ಸಮಾಜ ಅರ್ಥಪೂರ್ಣವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎರಡು ವಾರ ಕಾಲ ಇಲ್ಲಿ ನಡೆಯುವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಉತ್ಸವವನ್ನು ಸಡಗರದ ಮಧ್ಯೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅವರು ಉದ್ಘಾಟಿಸಿ ಮಾತನಾಡಿ, ಅಹಿಂಸೆಗೆ ಸಮಾಜ ಮತ್ತು ವ್ಯಕ್ತಿಯ ಜೀವನದಲ್ಲಿ ಕೆಡಕು ಕಡಿಮೆ ಮಾಡುವ ಶಕ್ತಿಯಿದೆ ಎಂದರು.
ಎಲ್ಲ ದಾರಿಗಳೂ ಬೆಳಗೊಳದತ್ತ...
ಶ್ರವಣಬೆಳಗೊಳ, ಡಿ. 2– ಜೈನರ ಪವಿತ್ರ ಯಾತ್ರಾಸ್ಥಳವಾದ ಈ ಊರಿನಲ್ಲಿ ನಡೆಯುತ್ತಿರುವ ಗೊಮ್ಮಟೇಶ್ವರ ಸ್ವಾಮಿಗೆ ಮಹಾಮಸ್ತಕಾಭಿಷೇಕ ರಾಷ್ಟ್ರಾದ್ಯಂತ ಲಕ್ಷಾಂತರ ಮಂದಿ ಭಕ್ತರನ್ನು ಇಲ್ಲಿಗೆ ಸೆಳೆಯಲಿದೆ.
ಈ ತಿಂಗಳ 19 ರಂದು ಮಹಾಮಜ್ಜನ ಕೊನೆಗೊಳ್ಳುವವರೆಗೂ ಎಲ್ಲ ದಾರಿಗಳು ಶ್ರವಣಬೆಳಗೊಳದತ್ತ ಸಾಗುತ್ತವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಿಂದ ಇಲ್ಲಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.
ಬಿಜೆಪಿ ಅಪಾಯ ಅಳಿದಿಲ್ಲ– ಪ್ರಧಾನಿ
ನವದೆಹಲಿ, ಡಿ. 2 (ಪಿಟಿಐ)– ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ. ಈ ಪಕ್ಷ ದಿಗ್ಭ್ರಮೆ ಮೂಡಿಸುವಷ್ಟು ಹೀನಾಯ ಸೋಲನ್ನು ಅನುಭವಿಸಿದೆ ಆದರೆ ನಿರ್ನಾಮವಾಗಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ತಿಳಿಸಿದರು.
ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಹಂತವು ಘರ್ಷಣೆಯ ಹಂತಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.