ಕಾಶ್ಮೀರದಿಂದ ಸೇನೆ ವಾಪಸಿಗೆ ಪಾಕ್ ಆಗ್ರಹ
ಇಸ್ಲಾಮಾಬಾದ್, ಜ. 2 (ಪಿಟಿಐ, ಯುಎನ್ಐ)– ಕಾಶ್ಮೀರ ವಿವಾದದ ಕುರಿತು ತನ್ನ ಬಿಗಿ ನಿಲುವಿಗೆ ಅಂಟಿಕೊಂಡಿರುವ ಪಾಕಿಸ್ತಾನ ಪ್ರಧಾನಿ ಬೆನಜೀರ್ ಭುಟ್ಟೊ ಅವರು ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳಿಗೆ ಸಂಬಂಧಪಟ್ಟಂತೆ ಭಾರತವು ‘ನಿರ್ದಿಷ್ಟ’ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಾಯಪಡಿಸಿದ್ದಾರೆ.
ಕಾಶ್ಮೀರ ಕಣಿವೆಯಿಂದ ಭಾರತದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವುದೂ ಸೇರಿದಂತೆ ದಮನಕಾರಿ ಕ್ರಮಗಳನ್ನು ರದ್ದುಗೊಳಿಸಬೇಕೆಂಬುದು ಪಾಕಿಸ್ತಾನದ ಪ್ರಮುಖ ಬೇಡಿಕೆಯಾಗಿರುವುದು ಸ್ಪಷ್ಟವಾಗಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಜೆ.ಎನ್. ದೀಕ್ಷಿತ್ ಅವರು ಪಾಕಿಸ್ತಾನದ ಷಹರ್ಯಾರ್ ಖಾನ್ ಅವರೊಡನೆ ಇಂದು ಇಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಿದ ನಂತರ ಬೆನಜೀರ್ ಅವರನ್ನು ಭೇಟಿಯಾದಾಗ ಅವರು ಪಾಕಿಸ್ತಾನದ ಈ ನಿಲುವನ್ನು ತಿಳಿಸಿದರು.
ಹರ್ಷದ್ ವಿರುದ್ಧ ಆರೋಪಪಟ್ಟಿ ಸಿದ್ಧ
ನವದೆಹಲಿ, ಜ. 2 (ಪಿಟಿಐ)– ರಾಷ್ಟ್ರೀಯ ಗೃಹ ನಿರ್ಮಾಣ ಮಂಡಳಿಗೆ (ಎನ್ಎಚ್ಬಿ) 1,214 ಕೋಟಿ ರೂಪಾಯಿಗಳಷ್ಟು ಹಣ ವಂಚಿಸಿದ ಆರೋಪದ ಮೇಲೆ ಷೇರು ದಳ್ಳಾಳಿ ಹರ್ಷದ್ ಮೆಹ್ತಾ ಅವರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಪಟ್ಟಿಯೊಂದನ್ನು ಅಂತಿಮಗೊಳಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.