ಅಜಿತ್ ಸೇರಿ ಹತ್ತು ಸದಸ್ಯರು ಕಾಂಗೈಗೆ: ರಾವ್ ಸರ್ಕಾರಕ್ಕೆನಿಚ್ಚಳ ಬಹುಮತ
ನವದೆಹಲಿ, ಡಿ. 30 (ಯುಎನ್ಐ)– ಇಂದಿನ ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಹತ್ತು ಮಂದಿ ಲೋಕಸಭಾ ಸದಸ್ಯರನ್ನು ಒಳಗೊಂಡ ಅಜಿತ್ ಸಿಂಗ್ ನೇತೃತ್ವದ ಜನತಾ ದಳ–ಎ ಸಂಸದೀಯ ಪಕ್ಷವು ಕಾಂಗೈನಲ್ಲಿ ವಿಲೀನವಾಗುವುದರೊಂದಿಗೆ ನರಸಿಂಹರಾವ್ ಅವರ ಅಲ್ಪಸಂಖ್ಯಾತ ಸರ್ಕಾರ ಲೋಕಸಭೆಯಲ್ಲಿ ನಿಚ್ಚಳ ಬಹುಮತ ಪಡೆಯಿತು.
ಜೆಪಿಸಿ ವರದಿ ಪರಿಶೀಲಿಸಿ ಅಗತ್ಯ ಕ್ರಮ: ಪ್ರಧಾನಿ ರಾವ್ ಭರವಸೆ
ನವದೆಹಲಿ, ಡಿ. 30 (ಪಿಟಿಐ, ಯುಎನ್ಐ)– ಷೇರು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಲ್ಲಿಸಿದ ವರದಿಯನ್ನು ಸರ್ಕಾರ ವಿವರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು. ವರದಿಯ ಮೇಲೆ ಎರಡು ದಿನ ನಡೆದ ಚರ್ಚೆಗೆ ಹಣಕಾಸು ಸಚಿವ ಡಾ. ಮನಮೋಹನಸಿಂಗ್ ಅವರು ಉತ್ತರಿಸಿದ ಬಳಿಕ ಪ್ರಧಾನಿ ಮಾತನಾಡಿ, ಸಿಂಗ್ ನೀಡಿದ ಉತ್ತರವನ್ನು ತಾವು ಪೂರ್ಣ ಸಮರ್ಥಿಸುವುದಾಗಿ ಸ್ಪಷ್ಟಪಡಿಸಿದರು.
ಕೆ.ಆರ್. ಪೇಟೆ: ಗಾಳಿಯಲ್ಲಿ ಗುಂಡು
ಕೆ.ಆರ್. ಪೇಟೆ, ಡಿ. 30– ಕೆ.ಆರ್. ಪೇಟೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಇಂದು ಗ್ರಾಮ ಪಂಚಾಯ್ತಿ ಚುನಾವಣೆ ಮತ ಎಣಿಕೆ ಸಂದರ್ಭದಲ್ಲಿ ಉಂಟಾದ ಗಲಭೆಯನ್ನು ನಿಯಂತ್ರಿಸಲು ಕಲ್ಲು ತೂರಾಟ ನಡೆಸುತ್ತಿದ್ದ ಉದ್ರಿಕ್ತ ಜನರ ಮೇಲೆ ಪೊಲೀಸರು ಲಾಠಿ ಮತ್ತು ಅಶ್ರುವಾಯು ಪ್ರಯೋಗಿಸಿ ನಂತರ ಗಾಳಿಯಲ್ಲಿ ಗುಂಡು ಹಾರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.