ನಾಲ್ಕನೇ ಯೋಜನೆ ಕರಡು: ಮುಖ್ಯಮಂತ್ರಿಗಳ ಬೇಡಿಕೆಗಳಲ್ಲಿ ‘ರಾಜಕೀಯ’ ದೃಷ್ಟಿ
ನವದೆಹಲಿ, ಏ. 21– ರಾಷ್ಟ್ರೀಯ ಅಭಿವೃದ್ಧಿ ಮಂಡಲಿಯ ಸಭೆಯಲ್ಲಿ ನಾಲ್ಕನೇ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳು, ವಿಶೇಷತಃ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಮಂಡಿಸಿದ ಬೇಡಿಕೆಗಳು ‘ರಾಜಕೀಯ’ ದೃಷ್ಟಿಯಿಂದ ಕೂಡಿದುವು ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
‘ಮುಖ್ಯಮಂತ್ರಿಗಳು ಯಾವುದೇ ಪಕ್ಷಕ್ಕೆ ಸೇರಿದವರಾದರೂ ಸರಿಯೆ, ‘ತಾವು ತಮ್ಮ ರಾಜ್ಯದ ಯೋಜನೆಗಳ ಕಾರ್ಯ ಸಾಧನೆಗಾಗಿ ಹೋರಾಡುವವರು ಮತ್ತು ತಮ್ಮ ರಾಜ್ಯದ ಸಂಪನ್ಮೂಲಗಳ ಸಂರಕ್ಷಕರು’ ಎಂದು ತಮ್ಮ ಜನರಿಗೆ ತೋರಿಸಿಕೊಳ್ಳಲು ಅಪೇಕ್ಷಿಸುತ್ತಾರೆ’ ಎಂದು ಶ್ರೀಮತಿ ಗಾಂಧಿ ಸಂಸತ್ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದರು.
ಕೇಂದ್ರ ಯೋಜನೆ ವೆಚ್ಚವನ್ನು ಮೊಟಕುಮಾಡಿ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವರ್ಗಾಯಿಸಬೇಕೆಂಬ ಮುಖ್ಯಮಂತ್ರಿಗಳ ಪ್ರಮುಖ ಬೇಡಿಕೆಯನ್ನು ಒಪ್ಪಿಕೊಂಡರೂ ಪರಿಸ್ಥಿತಿಯೇನೂ ಉತ್ತಮಗೊಳ್ಳದೆಂದು ಶ್ರೀಮತಿ ಗಾಂಧಿ ನುಡಿದರು.
ಕ್ಷಿಪಣಿ ತಯಾರಿಕೆಗೆ ಶೀಘ್ರವೇ ಕಾರ್ಖಾನೆ
ನವದೆಹಲಿ, ಏ. 21– ಕ್ಷಿಪಣಿಗಳ ತಯಾರಿಕೆಗಾಗಿ ಸರ್ಕಾರಿ ಕ್ಷೇತ್ರದಲ್ಲಿ ಹೊಸ ಸಂಸ್ಥೆಯೊಂದನ್ನು ಶೀಘ್ರದಲ್ಲೇ ಸ್ಥಾಪಿಸುವ ಸಂಭವವಿದೆ.
ರಕ್ಷಣಾ ಉತ್ಪಾದನೆ ಸಚಿವ ಎಲ್.ಎನ್. ಮಿಶ್ರರವರು ಈ ವಿಚಾರವನ್ನು ಇಂದು ಲೋಕಸಭೆಯಲ್ಲಿ ಪ್ರಕಟಿಸಿ, ಕ್ಷಿಪಣಿ ತಯಾರಿಕೆ ಸಂಬಂಧವಾಗಿ ವಿದೇಶಿ ಸಂಸ್ಥೆಯೊಂದರಿಂದ ನೀಡಿಕೆ ಬಂದಿದ್ದು ಅದು ಸರ್ಕಾರದ ಪರಿಶೀಲನೆಯಲ್ಲಿದೆಯೆಂದರು.
ಅವರು ಪ್ರಕಟಿಸಿದ ಇತರ ಎರಡು ಮುಖ್ಯ ಅಂಶಗಳು: ರಕ್ಷಣಾ ಮತ್ತು ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಯಲ್ಲಿ ನಡೆದಿರುವ ಕೆಲಸದ ಫಲವಾಗಿ ಹೊಸ ಮಾದರಿಯ ಫಿರಂಗಿಯ ತಯಾರಿಕೆ, ಬೆಂಗಳೂರಿನ ಎಚ್.ಎ.ಎಲ್.ನಲ್ಲಿ ತಯಾರಾಗುತ್ತಿರುವ ಎಚ್.ಎನ್.–24 ವಿಮಾನದ ‘ರೀಹೀಟ್’ ವ್ಯವಸ್ಥೆ ಸಾಕಷ್ಟು ಪ್ರಗತಿ ಸಾಧಿಸಿದ್ದು ಅದನ್ನು ಅಂಗೀಕರಿಸುವ ಬಗೆಗೆ ಶೀಘ್ರವೇ ನಿರ್ಧಾರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.