ಸದ್ಯಕ್ಕೆ ತೀವ್ರ ಆರ್ಥಿಕ ಸುಧಾರಣೆ ಕ್ರಮ ಅಸಾಧ್ಯ– ಪ್ರಧಾನಮಂತ್ರಿಯ ಸೂಚನೆ
ನವದೆಹಲಿ, ಸೆ. 16– ರಾಷ್ಟ್ರದಲ್ಲಿ ಹೊಸ ಆರ್ಥಿಕ ಸುಧಾರಣೆಗಳನ್ನು ಶೀಘ್ರವೇ ಜಾರಿಗೆ ತರುವ ಸಂಭವವಿಲ್ಲವೆಂದು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಸೂಚನೆಯಿತ್ತರು.
ಹದಿನಾಲ್ಕು ಪ್ರಮುಖ ಬ್ಯಾಂಕುಗಳನ್ನು ಸರ್ಕಾರ ವಹಿಸಿಕೊಂಡಿರುವ ದೃಷ್ಟಿಯಿಂದ ಮುಂದಿನ ಕ್ರಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಸೂಕ್ತ ಕೆಲಸಕ್ಕೆ ಸರಿಯಾದ ವ್ಯಕ್ತಿಗಳ ನೇಮಕದ ಅಗತ್ಯ ವಿದೆಯೆಂದು ಒಪ್ಪಿದರು.
ವಾರ್ತಾ ಸಂಸ್ಥೆಗಳಿಗೆ ಪ್ರತ್ಯೇಕ ಕಾರ್ಪೊರೇಷನ್: ಕೇಂದ್ರದ ಅಸ್ತು
ನವದೆಹಲಿ, ಸೆ. 16– ಪತ್ರಿಕಾ ಆಯೋಗದ ಶಿಫಾರಸಿನಂತೆ ದೇಶದ ನಾಲ್ಕು ವಾರ್ತಾ ಸಂಸ್ಥೆಗಳಿಗೆ ಪ್ರತ್ಯೇಕ ಕಾರ್ಪೊರೇಷನ್ಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ.
ಪ್ರೆಸ್ಟ್ರಸ್ಟ್ ಆಫ್ ಇಂಡಿಯ, ಯುನೈಟೆಡ್ ನ್ಯೂಸ್ ಆಫ್ ಇಂಡಿಯ, ಹಿಂದೂಸ್ತಾನ್ ಸಮಾಚಾರ್ ಮತ್ತು ಸಮಾಚಾರ್ ಭಾರತಿ– ಈ ನಾಲ್ಕು ವಾರ್ತಾ ಸಂಸ್ಥೆಗಳಿಗೆ ಬೇರೆ ಬೇರೆ ಕಾರ್ಪೊರೇಷನ್ ಗಳನ್ನು ರಚಿಸಲಾಗುವುದೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಶಾಖೆ ಸಚಿವ ಐ.ಕೆ.ಗುಜ್ರಾಲ್ ಇಂದು ಇಲ್ಲಿ ಅನೌಪಚಾರಿಕ ಪತ್ರಿಕಾ ಸಂದರ್ಶನದಲ್ಲಿ ಪ್ರಕಟಿಸಿದರು.
ತಮಗೆ ಇಷ್ಟ ಬಂದಂತೆ ಭಾರತೀಯ ವಾರ್ತಾ ವರದಿಗಳನ್ನು ಕೊಂಕಿಸುವ ಮೂರನೆಯವರ ಕೈವಾಡ ತಪ್ಪಿಸಿ,
ವಿದೇಶಗಳಲ್ಲಿ ಭಾರತದ ಬಗ್ಗೆ ಸರಿಯಾದ ತಿಳಿವಳಿಕೆ ಉಂಟು ಮಾಡುವ ದೃಷ್ಟಿಯಿಂದ ಭಾರತೀಯ ಅಂತರರಾಷ್ಟ್ರೀಯ ವಾರ್ತಾಸಂಸ್ಥೆ ರಚಿಸುವ ಆಲೋಚನೆಯೂ ಪರಿಶೀಲನೆಯಲ್ಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.