ADVERTISEMENT

ಗುರುವಾರ, 2–10–1969

ಗುರುವಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:00 IST
Last Updated 1 ಅಕ್ಟೋಬರ್ 2019, 20:00 IST

ಗಡಿನಾಡು ಗಾಂಧಿ ಬಾದಷಹಾ ಖಾನರಿಗೆ ದೆಹಲಿಯಲ್ಲಿ ದಿವ್ಯ ಸ್ವಾಗತ

ನವದೆಹಲಿ, ಅ. 1– ಇಪ್ಪತ್ತೆರಡು ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಗಡಿನಾಡು ಗಾಂಧಿ ಖಾನ್ ಅಬ್ದುಲ್‌ ಗಫಾರ್‌ಖಾನರಿಗೆ ಬುಧವಾರ ರಾಜಧಾನಿ ದೆಹಲಿ ಐತಿಹಾಸಿಕ ಸ್ವಾಗತ ನೀಡಿತು. ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಪಾಲಂ ನಿಲ್ದಾಣದಲ್ಲಿ ಬಾದಷಹಾಖಾನರು ಬಂದ ವಿಶೇಷ ವಿಮಾನದ ಏಣಿ ಏರಿ ನಿಸ್ಸೀಮ ಸತ್ಯಾಗ್ರಹಿಯನ್ನು ಆದರದಿಂದ ಬರಮಾಡಿಕೊಂಡರು.

ಅಲ್ಲಿ ನೆರೆದಿದ್ದ ಎರಡು ಲಕ್ಷ ಜನಸ್ತೋಮದ ಹರ್ಷೋದ್ಗಾರ ಗಡಿನಾಡು ಗಾಂಧಿ ಅವರಿಗೆ ಹೃದಯ ತುಂಬಿ ಬರುವ ಆತ್ಮೀಯ ಸ್ವಾಗತ ಕೋರಿತು.

ADVERTISEMENT

ಗಾಂಧಿ ಶತಾಬ್ದಿ ಸಮಾರಂಭಗಳ ಉದ್ಘಾಟನೆಗಾಗಿ ಅವರು ಆಗಮಿಸಿದ್ದಾರೆ.

ಭಾರತದಲ್ಲಿ ಹಿಂಸೆ, ದ್ವೇಷ ಕಂಡು ಸಂಕಟ, ಕಳವಳ

ನವದೆಹಲಿ, ಅ. 1– ಭಾರತದ ಕೆಲವು ಭಾಗಗಳಲ್ಲಿ ಕಂಡುಬರುತ್ತಿರುವ ಹಿಂಸಾಚಾರ ಹಾಗೂ ಪರಸ್ಪರ ದ್ವೇಷದ ಬಗ್ಗೆ ಇಂದು ಸಂಕಟ ಹಾಗೂ ಕಳವಳವನ್ನು ವ್ಯಕ್ತಪಡಿಸಿದ ಗಡಿನಾಡಿನ ನಾಯಕ ಖಾ‌ನ್ ಅಬ್ದುಲ್ ಗಫಾರ್ ಖಾನ್ ಅವರು ‘ನಾವು ಗಾಂಧಿ ಶತಾಬ್ದಿಯನ್ನು ಆಚರಿಸುತ್ತಿರುವಾಗ ಇವೆಲ್ಲಾ ತೀವ್ರ ವಿಷಾದಕರ’ ಎಂದರು.

ಈಗ ಪಾಕಿಸ್ತಾನದಲ್ಲಿರುವ ಹಿಂದಿನ ಸರಹದ್ದು ಪ್ರಾಂತ್ಯದಿಂದ ಬಂದ ಐದು ಸಾವಿರ ಮಂದಿಯನ್ನು ಉದ್ದೇಶಿಸಿ ಭಾಷಣ ಮಾಡಿದ ಬಾದಷಹಾ ಖಾನ್‌ ಅವರು ‘ಗುಲಾಮರ ಗುಲಾಮರಾಗುವುದಕ್ಕಾಗಿ ನಾವು ನಮ್ಮ ಸರ್ವಸ್ವವನ್ನೂ ತ್ಯಾಗ ಮಾಡಲಿಲ್ಲ, ಬ್ರಿಟಿಷರ ಕಿರುಕುಳಗಳನ್ನೆಲ್ಲಾ ಸಹಿಸಲಿಲ್ಲ, ನಮ್ಮ ಆಸ್ತಿಪಾಸ್ತಿಯನ್ನೆಲ್ಲಾ ಬೆಂಕಿಗೆ ಆಹುತಿಯಾಗಿಸಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.