ಸಿ.ಬಿ. ಗುಪ್ತರ ಸಭೆಯಲ್ಲಿ ಕಾಂಗ್ರೆಸ್ ಬಣಗಳ ನಡುವೆ ಹೊಡೆದಾಟ
ಕಾನ್ಪುರ, ಜ. 11– ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಸಿ.ಬಿ. ಗುಪ್ತ ಅವರು ಇಂದು ಇಲ್ಲಿನ ತಿಲಕ್ ಸಭಾಂಗಣದಲ್ಲಿ ಭಾಷಣ ಮಾಡಿದ ಯುವಜನ ಕಾಂಗ್ರೆಸ್, ಇನ್ಟೆಕ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಂಯುಕ್ತ ಸಭೆಯಲ್ಲಿ ಇಂದಿರಾ ಮತ್ತು ನಿಜಲಿಂಗಪ್ಪನವರ ಗುಂಪುಗಳ ಬೆಂಬಲಿಗರು ಹೊಡೆದಾಡಿದರು.
ಮುಖ್ಯಮಂತ್ರಿಗಳು ಬಂದ ಕೂಡಲೇ ಗಲಭೆ ಪ್ರಾರಂಭವಾಯಿತು. ಕರಿಯ ಕರವಸ್ತ್ರಗಳನ್ನು ಬೀಸುತ್ತಾ, ಸಂಸ್ಥೆ ಕಾಂಗ್ರೆಸ್ಸಿನ ನಾಯಕರ ವಿರುದ್ಧ ಘೋಷಣೆ ಕೂಗುತ್ತಾ ಇಂದಿರಾ ಗುಂಪಿನ ಬೆಂಬಲಿಗರು ಮುಖ್ಯಮಂತ್ರಿಯನ್ನು ಸ್ವಾಗತಿಸಿದಾಗ ಗದ್ದಲ ಉಂಟಾಯಿತು.
ಲೋಕಸಭೆ ವಿಸರ್ಜನೆ ಪ್ರಧಾನಿ ಸೂಚಿದರೆ ರಾಷ್ಟ್ರಪತಿ ಒಪ್ಪಬೇಕೆ?
ಮದ್ರಾಸ್, ಜ. 11– ಪ್ರಧಾನ ಮಂತ್ರಿ ಸಲಹೆ ಮಾಡಿದರೆ ಲೋಕಸಭೆಯನ್ನು ವಿಸರ್ಜಿಸಲು ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಬದ್ಧರೆ?
ಲೋಕಸಭೆಯನ್ನು ವಿಸರ್ಜಿಸಬೇಕೆಂದು ಪ್ರಧಾನಿಯು ಮಾಡಿಕೊಳ್ಳುವ ಮನವಿಯನ್ನು ಈ ಶಿಫಾರಸಿನ ಅರ್ಹತೆಯನ್ನು ಪರಿಶೀಲಿಸುವ ಪ್ರಯತ್ನ ನಡೆಸದೆಯೇ ರಾಷ್ಟ್ರಪತಿಗಳು ಮಂಜೂರು ಮಾಡಬೇಕು ಎಂದು ಇತ್ತೀಚೆಗೆ ರಾಜ್ಯಪಾಲರುಗಳ ಸಮ್ಮೇಳನವೊಂದರಲ್ಲಿ ಗೃಹಸಚಿವ ಶ್ರೀ ವೈ.ಬಿ. ಚಾವಣರು ಹೇಳೀದರೆಂದು ವರದಿಯಾಗಿದೆ.
ರಾಜಧನ ಬಗ್ಗೆ ರಾಜರ ಸಲಹೆ: ಕಾರ್ಯಸಾಧುವಲ್ಲ
ನವದೆಹಲಿ, ಜ. 11– ರಾಜಧನದ ವಿಚಾರದಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ತಾವು ಸಿದ್ಧ ಎಂದು ಮಾಜಿ ರಾಜರುಗಳ ಕೂಟದ ಪ್ರತಿನಿಧಿಗಳು ಮಾಡಿದ್ದ ಸೂಚನೆ ತಡವಾಗಿ ಬಂದಿತು ಮತ್ತು ಈ ಹಂತದಲ್ಲಿ ಈ ಸೂಚನೆ ಕಾರ್ಯಸಾಧುವಾದುದಲ್ಲ ಎಂದು ಇಲ್ಲಿನ ಅಧಿಕೃತ ವಲಯಗಳಲ್ಲಿ ಪರಿಗಣಿಸಲಾಗಿದೆ.
ಸಂವಿಧಾನದ ತಿದ್ದುಪಡಿಯ ಮೂಲಕ್ಕೆ ರಾಜಧನದ ರದ್ಧತಿಗೆ ಬದಲಾಗಿ ಈ ಸೂಚನೆಯನ್ನು ಅಂಗೀಕರಿಸಲು ಸರ್ಕಾರ ಸಿದ್ಧವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.