ಬೆಂಗಳೂರು, ಸೆಪ್ಟೆಂಬರ್ 30– ‘ಕಾಂಗ್ರೆಸ್ಸಿನ ಶುದ್ಧೀಕರಣಕ್ಕೆಂದು’ ಕಳೆದ ಮೂರು ವಾರಗಳಿಂದ ಅಜ್ಞಾತರಾಗಿ ಧ್ಯಾನಾವಸ್ಥೆ ಯಲ್ಲಿ ತೊಡಗಿರುವ ಮಾಜಿ ರೈಲ್ವೆ ಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಧ್ಯಾನ ಮುಗಿಸಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ನಂದಿ ಬೆಟ್ಟದ ಬಳಿಯ ಪಕ್ಷಿ ಬಾಬಾ ಆಶ್ರಮದಲ್ಲಿ ಬರೇ ಹಣ್ಣು ಹಂಪಲುಗಳನ್ನು ಸೇವಿಸಿ, ದಿನವೂ ಆರೇಳು ಮೈಲಿ ದೂರ ನಡೆದು ವ್ಯಾಯಾಮ ಪಡೆದುಕೊಂಡು, ಗೀತ ಪಠಣ, ಪತ್ರಿಕೆ ವಾಚನಗಳಲ್ಲಿ ದಿನಗಳೆಯುತ್ತಿ ರುವ ಕೆಂಗಲ್ ಅವರು ಆರೋಗ್ಯದಲ್ಲಿ ಅತ್ಯುತ್ತಮವಾಗಿದ್ದಾರೆ. ಸ್ವಲ್ಪ ಗಡ್ಡವನ್ನೂ ಬಿಟ್ಟಿದ್ದಾರೆ ಎಂದು ಇಂದು ಅವರನ್ನು ಭೇಟಿ ಮಾಡಿಕೊಂಡು ಬಂದ ಮಾಜಿ ಮೇಯರ್ ಜೆ. ಲಿಂಗಯ್ಯ ಅವರು ಮಧ್ಯಾಹ್ನ ‘ಪ್ರಜಾವಾಣಿ’ಗೆ ಟೆಲಿಫೋನ್ ಮಾಡಿ ತಿಳಿಸಿದರು.
l ರಷ್ಯಾದೊಡನೆ ಶಾಂತಿ ಕೌಲಿಗೆ ಜಪಾನ್ ಯತ್ನ
ಟೋಕಿಯೋ, ಸೆಪ್ಟೆಂಬರ್ 30– ಚೀನದೊಡನೆ ಬಾಂಧವ್ಯ ಸುಧಾರಣೆಗೊಳಿಸಿ ಕೊಂಡ ನಂತರ ಈಗ ರಷ್ಯಾದೊಡನೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಮಾತುಕತೆಗಳ ಕಡೆಗೆ ತಮ್ಮ ರಾಷ್ಡ್ರ ಗಮನ ಕೇಂದ್ರೀಕರಿಸುವುದೆಂದು ಜಪಾನ್ ಪ್ರಧಾನಿ ಕಾಕುಯಿ ತನಾಕಾ ಅವರು ಇಂದು ತಿಳಿಸಿದರು.
ಚೀನಕ್ಕೆ ಕೊಟ್ಟಿದ್ದ ಆರು ದಿನಗಳ ಐತಿಹಾಸಿಕ ಭೇಟಿ ನಂತರ ತನಾಕಾ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿ, ಪೂರ್ವಭಾವಿ ಮಾತುಕತೆಗಳನ್ನು ಪ್ರಾರಂಭಿಸಲು ವಿದೇಶಾಂಗ ಸಚಿವ ಶಾಖೆ ಈಗ ಸೋವಿಯತ್ ಅಧಿಕಾರಿಗಳೊಡನೆ ವ್ಯವಹರಿಸುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.