ಸೋಯುಜ್ ಹುತಾತ್ಮರಿಗೆ ಅಂತ್ಯ ಗೌರವ
ಮಾಸ್ಕೊ, ಜುಲೈ 1– ರಷ್ಯಾದ ಮೂವರು ಗಗನಯಾತ್ರಿಗಳಾದ ಜಾರ್ಜಿ ಡೊಬ್ರೋವೋಲ್ಸಿ, ವ್ಲಾಡಿಸ್ಲಾವ್ ವೋಲ್ನೋವ್ ಮತ್ತು ವಿಕ್ಟರ್ ಪ್ಯಾಟ್ಸೆಯೇವ್ ಅವರುಗಳ ಕಳೇಬರಗಳನ್ನು ಸೇನೆಯ ಪ್ರಧಾನ ಕಚೇರಿಯಲ್ಲಿ ಇಡಲಾಗಿದೆ.
ಶವಪರೀಕ್ಷೆಯ ನಂತರ ಬೈಕೋನೂರ್ ಬಾಹ್ಯಾಕಾಶ ಪ್ರಯೋಗ ಕೇಂದ್ರದಿಂದ ಕಳೇಬರಗಳನ್ನು ಇಲ್ಲಿಗೆ ತರಲಾಯಿತು.
ಚೀನಾ, ಪಾಕ್ ಬೆದರಿಕೆ ಕಾರಣ ಸೈನ್ಯ ಪ್ರಾಬಲ್ಯಕ್ಕೆ ಸರ್ಕಾರದ ಗಮನ
ನವದೆಹಲಿ, ಜುಲೈ 1– ಚೀನಾ ಮತ್ತು ಪಾಕಿಸ್ತಾನಗಳಿಂದ ದೇಶದ ಭದ್ರತೆಗೆ ಸಂಭವನೀಯ ಬೆದರಿಕೆಯನ್ನೇ ಪ್ರಮುಖ ಆಧಾರವಾಗಿಟ್ಟುಕೊಂಡು ಭಾರತದ ರಕ್ಷಣೆ ಹಾಗೂ ಯೋಜನಾ ನೀತಿಗಳನ್ನು ರೂಪಿಸಲಾಗುವುದು.
ರಕ್ಷಣಾ ಸಚಿವ ಶಾಖೆಯು ಇಂದು ಲೋಕಸಭೆಗೆ ಸಲ್ಲಿಸಿದ ತನ್ನ ವಾರ್ಷಿಕ ವರದಿಯಲ್ಲಿ ‘ನಮ್ಮ ಭದ್ರತೆಗೆ ಒಡ್ಡಿರುವ ಬೆದರಿಕೆಗಳ ಕಾರಣ ಸೈನ್ಯ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ’ ಎಂದು ತಿಳಿಸಿದೆ.
ಚೀನಾವು ಮಾಡುತ್ತಿರುವ ಭಾರತ ವಿರೋಧಿ ಪ್ರಚಾರದ ಗಡುಸು ಸ್ವಲ್ಪ ತಗ್ಗಿದ್ದರೂ ಅದರಿಂದ ‘ನಮ್ಮ ಭದ್ರತೆಗೆ ಇರುವ ಮಿಲಿಟರಿ ಬೆದರಿಕೆಯಲ್ಲಿ ಗಣನೀಯ ಬದಲಾವಣೆಯಾಗಿಲ್ಲ’ ಎಂದು ವರದಿ ಹೇಳಿದೆ.
ಬರುವ ವರ್ಷದಿಂದ ಭಾರತದ ಬಟ್ಟೆ ರಫ್ತಿಗೆ ಸುಂಕ ವಿನಾಯಿತಿ ರದ್ದು: ಬ್ರಿಟನ್ ಪ್ರಕಟಣೆ
ಲಂಡನ್, ಜುಲೈ 1– ಸುಂಕ ನೀಡದೆಯೇ ಹತ್ತಿ ಬಟ್ಟೆಯನ್ನು ಬ್ರಿಟನ್ನಿಗೆ ರಫ್ತು ಮಾಡಲು ಭಾರತಕ್ಕೆ ಅವಕಾಶ ಮಾಡಿ ಕೊಡುವ ರಿಯಾಯಿತಿ ವಾಣಿಜ್ಯ ಒಪ್ಪಂದವು ಮುಂದಿನ ಜನವರಿ 1ರಿಂದ ರದ್ದಾಗುವುದೆಂದು ಬ್ರಿಟನ್ನಿನ ವಾಣಿಜ್ಯ ಸಚಿವ ಮೈಕೇಲ್ ನೋಬ್ಲೆ ನಿನ್ನೆ ಕಾಮನ್ಸ್ ಸಭೆಯಲ್ಲಿ ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.