ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನಕ್ಕೆ ಕಾನೂನು ಮಾಡಲು ಒತ್ತಾಯ
ಮೈಸೂರು, ಜೂನ್ 29– ರಾಜ್ಯ ಚಿತ್ರ ಮಂದಿರಗಳಲ್ಲಿ ಕನ್ನಡ ಚಿತ್ರಗಳ ಕಡ್ಡಾಯ ಪ್ರದರ್ಶನ ಮತ್ತು ಪ್ರಸ್ತುತ ಬಾಡಿಗೆ ಬದಲು ಶೇಕಡಾವಾರು ಆಧಾರದ ಮೇಲೆ ಚಿತ್ರಗಳನ್ನು ಪ್ರದರ್ಶಿಸುವಂತೆ ಕಾನೂನು ಮಾಡಬೇಕೆಂದು ಕನ್ನಡ ಚಳವಳಿಗಾರರ ನಾಯಕ ವಾಟಾಳ್ ನಾಗರಾಜ್ ಅವರು ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ನಿನ್ನೆ ಇಲ್ಲಿ ಮಾತನಾಡುತ್ತಿದ್ದ ಅವರು, ಕೇವಲ ಸಬ್ಸಿಡಿ ನಿಯಮ ಬದಲಾವಣೆ ವಿರುದ್ಧ ಚಳವಳಿ ನಡೆಸಲಿಚ್ಛಿಸುವ ರಾಜ್ಯ ಚಲನಚಿತ್ರ ಚೇಂಬರ್ನವರು ಈ ಬಗ್ಗೆ ಮೌನವಾಗಿರುವುದಕ್ಕೆ ತಮ್ಮ ವಿಷಾದವನ್ನು ವ್ಯಕ್ತ ಮಾಡಿದರು.
ಸಬ್ಸಿಡಿ ನಿಲ್ಲಿಸಿದರೆ ಕನ್ನಡ ಚಿತ್ರಗಳ ಮೇಲೆ ಆಗುವ ಪರಿಣಾಮಕ್ಕಿಂತ ಚಿತ್ರಮಂದಿರಗಳವರು ತೆಗೆದುಕೊಳ್ಳುತ್ತಿರುವ ‘ದುಬಾರಿ ಬಾಡಿಗೆ’ ಯಿಂದ ಚಿತ್ರರಂಗದ ಮೇಲೆ ‘ಘೋರ ಪರಿಣಾಮ’ ಆಗುತ್ತದೆ ಎಂದು ವಾಟಾಳ್ ತಿಳಿಸಿದರು.
ಚಾರಿತ್ರ್ಯ, ಶಿಸ್ತು ಇಲ್ಲದೆ ದೇಶ ಅಭಿವೃದ್ಧಿಆಗದು– ಕೆ.ಎಸ್. ಹೆಗಡೆ
ಮಂಗಳೂರು, ಜೂನ್ 29– ಜಗತ್ತು ತೀವ್ರಗತಿಯಿಂದ ಅಭಿವೃದ್ಧಿ ಹೊಂದುತ್ತಿದೆ. ಆದರೆ ನಮ್ಮಲ್ಲಿ ರಾಷ್ಟ್ರೀಯ ಚಾರಿತ್ರ್ಯ ಮತ್ತು ಶಿಸ್ತು ಬೆಳೆಯದೆ, ಸಾಕಷ್ಟು ಅಭಿವೃದ್ಧಿ ಹೊಂದಿಲ್ಲವೆಂದು ಭಾರತ ಶ್ರೇಷ್ಠ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಹೆಗಡೆ ಅವರು ಹೇಳಿದರು.
ಮಂಗಳೂರು ರೋಟರಿ ಕ್ಲಬ್ ಸದಸ್ಯರನ್ನುದ್ದೇಶಿಸಿ ಜೂನ್ 25ರಂದು ಅವರು ಭಾಷಣ ಮಾಡುತ್ತಾ, ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಜನತೆ ವಿವೇಚಿಸಿ ಸರ್ಕಾರಕ್ಕೆ ಯೋಗ್ಯ ಮಾರ್ಗದರ್ಶನ ನೀಡಬೇಕೆಂದು ಹೇಳಿದರು. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡು ಆಡಂಬರದ ಜೀವನಕ್ಕೆ ತಡೆ ಹಾಕಬೇಕೆಂದು ಅವರು ಕರೆಯಿತ್ತರು.
ಡಾ. ಎಚ್.ಡಿ. ಅಡ್ಯಂತಾಯ ಅವರು ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.