ಬೆಂಗಳೂರು, ಸೆ. 8– ಅಭಾವ ಉಂಟಾಗಿ ರುವ ರಾಜ್ಯದ 66 ತಾಲ್ಲೂಕುಗಳಲ್ಲಿ ದುರ್ಬಲರಿಗೆ ಸೆಪ್ಟೆಂಬರ್ 15ರಿಂದ ಹಾಲು ಮುಂತಾದ ಆಹಾರ ಒದಗಿಸುವ ಕಾರ್ಯಕ್ರಮ ಆರಂಭವಾಗಲಿದೆ.
ಈ ತಾಲ್ಲೂಕುಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳಲು ಕೇರ್ ಸಂಸ್ಥೆ ಒಪ್ಪಿದ್ದು ಸರ್ಕಾರ 9 ಲಕ್ಷ ರೂಪಾಯಿ ಮಂಜೂರು ಮಾಡಿದೆ.
ಇತ್ತೀಚೆಗೆ ಪ್ರವಾಸ ಮಾಡಿದ ಕಾಲದಲ್ಲಿ ನಿಶ್ಯಕ್ತ ವರ್ಗದ ಜನರಿಗೆ ತುರ್ತು ಆಹಾರ ಒದಗಿಸುವುದು ಅಗತ್ಯವೆಂದು ಅನೇಕರು ತಿಳಿಸಿದ ಕಾರಣ ನಗರಕ್ಕೆ ಹಿಂದಿರುಗಿದ ನಂತರ ರಾಜ್ಯಪಾಲ ಶ್ರೀ ಧರ್ಮವೀರ ಅವರು ಕೇರ್ ಸಂಸ್ಥೆಯೊಡನೆ ಚರ್ಚಿಸಿ ಈ ನಿರ್ಧಾರವನ್ನು ಕೈಗೊಂಡರು.
ರಾಯಚೂರು, ಗುಲ್ಬರ್ಗ, ಬಿದರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ಬಳ್ಳಾರಿ,ಕೋಲಾರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಬಿಜಾಪುರ ಹಾಗೂ ಧಾರವಾಡ ಜಿಲ್ಲೆಗಳ 66 ತಾಲ್ಲೂಕುಗಳಲ್ಲಿ ಈ ಕಾರ್ಯಕ್ರಮ ಆರಂಭವಾಗುವುದು.
ನಾಗರಿಕರ ಪರದಾಟದ ಬಗ್ಗೆ ಜಲಮಂಡಲಿ ಉದಾಸೀನ
ಬೆಂಗಳೂರು, ಸೆ. 8– ಬೆಂಗಳೂರಿನ ನಾಗರಿಕರು ಅನೇಕ ಭಾಗಗಳಲ್ಲಿ ನೀರಿಗೆ ಪರದಾಟ, ಚರಂಡಿ ವ್ಯವಸ್ಥೆಯ ಅವ್ಯವಸ್ಥೆಗಳನ್ನು ಅನುಭವಿಸುತ್ತಿದ್ದರೆ ಅದನ್ನು ಯೋಚಿಸಿ ಸಮಸ್ಯೆ ಬಗೆಹರಿಸಲು ನಗರಸಭೆಯೊಂದಿಗೆ ಚರ್ಚಿಸುವುದೂ ಜಲಮಂಡಳಿಗೆ ಬೇಕಿಲ್ಲ.
ಮೇಯರ್ ಅವರು ಅದಕ್ಕಾಗಿ ಜಲ ಮಂಡಲಿಯ ಅಧಿಕಾರ ವರ್ಗದವರವನ್ನು ಆಹ್ವಾನಿಸಿ ಇಂದು ವಿಶೇಷ ಸಭೆಯನ್ನು ಕರೆದಿದ್ದರೂ ಮಂಡಲಿಯ ಯಾವೊಬ್ಬ ಪ್ರತಿನಿಧಿಯ ಸುಳಿವಿರಲಿಲ್ಲ. ಸಭೆಗೆ ಬರಲಾಗುವುದಿಲ್ಲವೆಂಬ ಸೌಜನ್ಯದ ಪತ್ರವೂ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.