ಚಿಂತಾಮಣಿಯಲ್ಲಿ ಗೋಲಿಬಾರ್; 2 ಸಾವು, ಹತ್ತು ಜನಕ್ಕೆ ಗಾಯ
ಚಿಂತಾಮಣಿ, ಜ. 16– ಕೋಲಾರ ಜಿಲ್ಲೆ ಚಿಂತಾಮಣಿಯಲ್ಲಿ ಹೋಟೆಲ್ಗಳಲ್ಲಿ ತಿಂಡಿ ಬೆಲೆ ಇಳಿಸಬೇಕೆಂಬ ವಿದ್ಯಾರ್ಥಿಗಳ ಚಳವಳಿ ಇಂದು ಉಗ್ರರೂಪ ತಳೆದಾಗ ಪೊಲೀಸರು ಗೋಲಿಬಾರ್ ನಡೆಸಿದುದರ ಪರಿಣಾಮವಾಗಿ ಇಬ್ಬರು ಸತ್ತು, ಹತ್ತು ಮಂದಿ ಗಾಯಗೊಂಡರು. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕ.
ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಗೋಲಿಬಾರ್ ನಡೆಯಿತು. ಹೋಟೆಲುಗಳಲ್ಲಿ ತಿಂಡಿ ಬೆಲೆಗಳನ್ನು ಇಳಿಸಬೇಕೆಂದು ಒತ್ತಾಯಪಡಿಸಲು ಇಲ್ಲಿನ ಪಾಲಿಟೆಕ್ನಿಕ್ ಕಾಲೇಜು ಮತ್ತು ಪ್ರೌಢಶಾಲೆಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ನಗರದಲ್ಲಿ ಮೆರವಣಿಗೆ ನಡೆಸಿದರು.
ಶಾಸ್ತ್ರಿ ರೆಸ್ಟೊರೆಂಟ್ ಹೊರತು ಉಳಿದ ಅನೇಕ ಹೋಟೆಲುಗಳು ತಿಂಡಿ ದರ ಇಳಿಸುವುದಕ್ಕೆ ಒಪ್ಪಿದ್ದವು.
ಭೂಮಾಲೀಕರಿಗೆ ಪರಿಹಾರ: ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕುಗಳ ತತ್ವಶಃ ಒಪ್ಪಿಗೆ
ಬೆಂಗಳೂರು, ಜ. 16– ಭೂಸುಧಾರಣೆಯನ್ನು ಜಾರಿಗೆ ತರುವುದರಿಂದ ಭೂಮಾಲೀಕರಿಗೆ ನೀಡಬೇಕಾದ ಪರಿಹಾರ ಮೊಬಲಗನ್ನು ಬ್ಯಾಂಕುಗಳು ಸಾಲವಾಗಿ ನೀಡಬೇಕೆಂಬ ತತ್ವವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳು ಒಪ್ಪಿದ್ದಾರೆ.
ಬ್ಯಾಂಕುಗಳ ಪ್ರತಿನಿಧಿಗಳ ಸಭೆಯನ್ನು ಇಂದು ಕರೆದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಬ್ಯಾಂಕುಗಳ ಸಹಾಯಕ್ಕಾಗಿ ಮನವಿ ಮಾಡಿಕೊಂಡರು.
ಈ ಬಗ್ಗೆ ವಿವರಗಳನ್ನೊಳಗೊಂಡ ಯೋಜನೆಯನ್ನು ರೂಪಿಸಲು ಸಭೆಯಲ್ಲಿ ಅಭಿವೃದ್ಧಿ ಕಮಿಷನರು, ಕಂದಾಯ ಮತ್ತು ಹಣಕಾಸು ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಬ್ಯಾಂಕುಗಳ ಪ್ರತಿನಿಧಿಗಳನ್ನೊಳಗೊಂಡ ಉಪ ಸಮಿತಿಯೊಂದನ್ನು ರಚಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.