ತುರ್ಕಿಯಲ್ಲಿ ಭೂಕಂಪ: ನೂರಾರು ಸಾವು
ಅಂಕಾರಾ, ಮಾರ್ಚ್ 29– ತುರ್ಕಿಯ ಗೆದಿಜ್ ನಗರದಲ್ಲಿ ನಿನ್ನೆ ಮಧ್ಯರಾತ್ರಿಯ ನಂತರ ಭಾರಿ ಭೂಕಂಪ ಸಂಭವಿಸಿ ಇಡೀ ನಗರ ನೆಲಸಮವಾಗಿದ್ದು 350ಕ್ಕೂ ಹೆಚ್ಚು ಮಂದಿ ಮೃತರಾಗಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಇಲ್ಲಿಗೆ ಬಂದಿರುವ ಪೊಲೀಸ್ ವರದಿಗಳು ತಿಳಿಸಿವೆ.
ಸರ್ಕಸ್ ಕಲಾವಿದರ ಕಣ್ಣೀರಿನ ಕತೆ
ನವದೆಹಲಿ, ಮಾರ್ಚ್ 29– ಭಾರತೀಯ ಸರ್ಕಸ್ ಕಲಾವಿದರು ವಿಶ್ವದಲ್ಲೇ ಉತ್ತಮ ಕಲಾವಿದರ ಪಂಕ್ತಿಗೆ ಸೇರಿದವರು. ಅವರ ಕಲಾ ಪ್ರದರ್ಶನಕ್ಕೆ ಸರ್ಕಸ್ ಆಡಳಿತ ವರ್ಗದವರು ಉತ್ತಮ ವ್ಯವಸ್ಥೆ ಮಾಡಿದ ಪಕ್ಷದಲ್ಲಿ, ಭಾರತದ ಸರ್ಕಸ್ ಕಂಪನಿಗಳು ವಿದೇಶಗಳ ಹೆಚ್ಚು ಆಕರ್ಷಣೆಗೆ ಒಳಗಾಗುವುದಲ್ಲದೇ ಅಮೂಲ್ಯ ವಿದೇಶಿ ವಿನಿಮಯವನ್ನು ಗಳಿಸುವುವು.
ಭಾರತದ ಸರ್ಕಸ್ ಕೈಗಾರಿಕೆಯಲ್ಲಿನ ಕೆಲಸಗಾರರ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಇತ್ತೀಚೆಗೆ ಸಮೀಕ್ಷೆ ನಡೆಸಿ ಸಲ್ಲಿಸಿದ್ದ ವರದಿಯಲ್ಲಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಆಫ್ರಿಕಾ, ಪಶ್ಚಿಮ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಭಾರತದ ಸರ್ಕಸ್ಗಳು ಜನಪ್ರಿಯತೆ ಗಳಿಸಿವೆ.
ದೇಶದಲ್ಲಿ ಸುಮಾರು 200 ದೊಡ್ಡ ಮತ್ತು ಸಣ್ಣ ಸರ್ಕಸ್ ಕಂಪನಿಗಳಿವೆ ಹಾಗೂ ಸುಮಾರು 10,000 ಜನ ಈ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಕೆಲವು ವಲಯಗಳಿಂದ ತಿಳಿದುಬಂದಿದೆ.
ಜನವರಿ 1ರಿಂದಲಾದರೂ ಕನ್ನಡ ಪೂರ್ಣ ಆಡಳಿತ ಭಾಷೆಯಾಗಲೆಂದು ಒತ್ತಾಯ
ಬೆಂಗಳೂರು, ಮಾರ್ಚ್ 29– ಮುಂದಿನ ಜನವರಿ ಒಂದರಿಂದಲಾದರೂ ರಾಜ್ಯದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಪೂರ್ಣವಾಗಿ ಜಾರಿಗೆ ತರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ. ನಾರಾಯಣರವರು ಇಂದು ಇಲ್ಲಿ ಸರ್ಕಾರವನ್ನು ಒತ್ತಾಯಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.